ಚನ್ನಪಟ್ಟಣ: ನಗರದ ಹೃದಯ ಭಾಗದಲ್ಲಿರುವ ಕೊಲ್ಲಾಪುರದಮ್ಮ ಮಹಾಲಕ್ಷ್ಮೀ ದೇವಾಲಯದ ಬಾಗಿಲು ಮುರಿದಿರುವ ಕಳ್ಳರು, ದೇವಾಲಯದಲ್ಲಿದ್ದ ಬೀರು ಒಡೆದು ಲಕ್ಷ್ಷಾಂತರ ರೂ ಮೌಲ್ಯದ ಚಿನ್ನದ ತಾಳಿ ಹಾಗೂ ಬೆಳ್ಳಿ ಪದಾರ್ಥಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
ನಗರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಶ್ರೀ ಕೊಲ್ಲಾಪುರದಮ್ಮ ಮಹಾಲಕ್ಷ್ಮೀ ದೇವಾಲಯದಲ್ಲಿ ಕಳವು ನಡೆದಿರುವುದು ನಗರದ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ. ರಾತ್ರಿ ಕಳ್ಳರು ಈ ಕೃತ್ಯವೆಸಗಿದ್ದು, ಸೈಕ್ಲೋನ್ ಎಫೆಕ್ಟ್ನಿಂದ ಮಳೆಯನ್ನು ಬಳಸಿಕೊಂಡ ಕಳ್ಳರು, ದೇವಾಲಯದ ಮುಂಬಾಗಿಲ ಬೀಗ ಒಡೆದು ನಂತರ ದೇವರ ಗರ್ಭಗುಡಿಯ ಬಾಗಿಲು ಒಡೆದು ಕಳವು ಮಾಡಿದ್ದಾರೆ.
ಗರ್ಭಗುಡಿಯಲ್ಲಿದ್ದ ದೇವರ ಮೇಲೆ ಹಾಕುವ ಆಭರಣ ಶೇಖರಣೆ ಮಾಡಿಡುವ ಬೀರುವನ್ನು ಒಡೆದ ಕಳ್ಳರು ಬೀರುವಿನಲ್ಲಿದ್ದ ಚಿನ್ನದ ಆರು ತಾಳಿ, ಎರಡು ದೇವರ ಬೆಳ್ಳಿ ಮುಖವಾಡಗಳು ಸೇರಿದಂತೆ ಲಕ್ಷ್ಷಾಂತರ ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಈ ಪ್ರಕರಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ನಗರ ಪೊಲೀಸರು, ದೇವಾಲಯವ ಗರ್ಭಗುಡಿಯನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ, ಅಲ್ಲದೆ ಅದೇ ದಿನ ರಾತ್ರಿ ೧೨ನೇ ಕ್ರಾಸ್ನಲ್ಲಿರುವ ಶ್ರೀ ಅಂಜನೇಯ ಸ್ವಾಮಿ ದೇವಾಲಯವನ್ನು ಕಳವು ಮಾಡಿದ್ದಾರೆಂದು ಹೇಳಲಾಗಿದೆ.
ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.