ರಾಮನಗರ: ಆಧುನಿಕ ಕನ್ನಡ ಕಾವ್ಯಗಳು ಜನಿಸಿ ಶತಮಾನಗಳೇ ಸಂದಿದ್ದರೂ ಕಾವ್ಯ ಪರಂಪರೆ ಅನೇಕ ಏರಿಳಿತಗಳನ್ನು ಕಂಡಿದೆ. ಹೀಗಾಗಿ ಕಾವ್ಯದ ಮರು ಚಿಂತನೆ ನಡೆಸುವ ಅಗತ್ಯವಿದೆ ಎಂದು ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೈಲಾಂಚ ಹೋಬಳಿ ಕೃಷ್ಣಾಪುರದೊಡ್ಡಿಯಲ್ಲಿರುವ ತಾನಿನಾ ರಂಗದಂಗಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಶಿವರಾತ್ರಿ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಉತ್ಸವ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಾವ್ಯ ರಚನಾಕಾರನಿಗೆ ಸಾಮಾಜಿಕ ಸಮಸ್ಯೆ, ತೊಳಲಾಟ, ಬದುಕಿನ ವಿವಿಧ ಆಯಾಮಗಳ ಬಗ್ಗೆ ಅರಿವಿನ ಜೊತೆಗೆ ನಿರಂತರ ಅಧ್ಯಯನದ ಅಭಿರುಚಿ ಇರಬೇಕು. ಅಲ್ಲದೆ ಕಾವ್ಯವನ್ನು ಯಾರಿಗಾಗಿ ಬರೆಯಬೇಕು, ಏತಕ್ಕೆ ಬರೆಯಬೇಕು ಎನ್ನುವ ಪ್ರಶ್ನೆಯನ್ನು ಹಾಕಿಕೊಂಡಾಗ ಮಾತ್ರ ಉತ್ತಮ ಕಾವ್ಯಗಳು ಹೊರಬರಲು ಸಾಧ್ಯ ಎಂದು ಪ್ರತಿಪಾದಿಸಿದರು.
ಜಾತಿ ವ್ಯವಸ್ಥೆ, ಸಾಮಾಜಿಕ ಅನಿಷ್ಠ ಪದ್ದತಿಗಳು ಸೇರಿದಂತೆ ಸಮಾಜದಲ್ಲಿರುವ ಅನಿಷ್ಠಗಳನ್ನು ತೆಗೆದುಹಾಕಲು ಸಾಕಷ್ಟು ವರ್ಷಗಳ ಹಿಂದೆಯೇ ಗೌತಮ ಬುದ್ಧ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಶ್ರಮಿಸಿದ್ದರು. ಆದರೆ ಇಂದು ತೋರಿಕೆಗೆ ಹಾಗೂ ಪ್ರಚಾರಕ್ಕಾಗಿ ಮಾತ್ರ ಸಮಾಜದ ಕಣ್ಣೊರೆಸುವ ಮನಸ್ಥಿತಿಯ ಜನರಿದ್ದಾರೆ. ಉತ್ತಮ ಕಾವ್ಯಗಳ ಮೂಲಕ ಸಮಾಜವನ್ನು ತಿದ್ದುವ ಕೆಲವಾಗಬೇಕು ಎಂದು ತಿಳಿಸಿದರು.
ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಮಾತನಾಡಿ, ಕವಿಗಳು ವಸ್ತುನಿಷ್ಠವಾಗಿ ಕವನಗಳನ್ನು ರಚಿಸಿದಾಗ, ನಿರಂತರ ಸಾಹಿತ್ಯವನ್ನು ಅಭ್ಯಸಿಸಿದಾಗ ಮಾತ್ರ ಗುಣಮಟ್ಟದ ಕಾವ್ಯ ಸಾಹಿತ್ಯಗಳು ಹೊರಬರಲು ಸಾಧ್ಯ. ಕನ್ನಡದ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಾಹಿತಿಗಳು ಮುಂದಾಗಬೇಕು ಎಂದು ತಿಳಿಸಿದರು.
ಕವಿಗೋಷ್ಠಿಯಲ್ಲಿ ತಾ.ಸಿ.ತಿಮ್ಮಯ್ಯ, ಡಾ.ದೇವರಾಜು, ಡಾ.ಸುನೀಲ್ಕುಮಾರ್, ಪೂರ್ಣಿಮಾ ಹುಲುವಾಡಿ, ವಿಜಯಕುಮಾರ್, ಹೆಚ್.ಎಸ್.ಹೆಬ್ಬಳಲು, ವೆಂಕಟಗಿರಿಯಪ್ಪ, ರಾವುಗೊಡ್ಲು, ಎಸ್.ಎಲ್.ಲಕ್ಕಪ್ಪ, ಪೂರ್ಣಚಂದ್ರ, ಸಾ.ಮ.ಶಿವಮಲ್ಲಯ್ಯ, ಕವಿತಾರಾವ್ ಅವರುಗಳು ಕವಿತೆಗಳನ್ನು ವಾಚಿಸಿದರು.
ಸಾಂಸ್ಕೃತಿಕ ಉತ್ಸವದಲ್ಲಿ ಬೆಂಗಳೂರಿನ ಕಾವ್ಯರಾವ್ ಮತ್ತು ತಂಡದವರು ದೇವರನಾಮ, ಕನಕಪುರದ ಕೆ.ಶಿವರಾಮು ಮತ್ತು ತಂಡದವರು ಜಾನಪದ ಗೀತೆ, ಲಿಂಗರಾಜು ಮತ್ತು ತಂಡ ನೀಲಗಾರರ ಪದಗಳನ್ನು ಹಾಡಿ ರಂಜಿಸಿದರು. ಶಾಂತಲಾ ಚಾರಿಟಬಲ್ ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಕವಿತಾರಾವ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.