ರಾಮನಗರ: ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ(ಅಸಿಸ್ಟೆಂಟ್ ಕಂಟ್ರೋಲರ್)ಹುದ್ದೆಗೆ ಬಿಡದಿ ಹೋಬಳಿ ಹೆಜ್ಜಾಲ ಸಮೀಪದ ಜುಟ್ಟನಪಾಳ್ಯ ಗ್ರಾಮದ ಬಿ.ಶಿಲ್ಪಾ ಆಯ್ಕೆಯಾಗಿದ್ದಾರೆ.
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿ ಹೆಜ್ಜಾಲದ ಜುಟ್ಟನಪಾಳ್ಯ ಗ್ರಾಮದ ವಾಸಿಗಳಾದ ಬಸವರಾಜು ಮತ್ತು ಜಯಲಕ್ಷ್ಮಿ ಎಂಬ ಟೈಲರ್ ದಂಪತಿಗಳ ಪುತ್ರಿಯಾಗಿರುವ ಬಿ.ಶಿಲ್ಪಾ ಅವರು ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಕೆಎಎಎಸ್ ಪರೀಕ್ಷೆಯಲ್ಲಿ ಒಟ್ಟು 910.75 ಅಂಕಗಳನ್ನು ಗಳಸಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಬಿ.ಶಿಲ್ಪಾ ಅವರು ಬೆಂಗಳೂರಿನ ಬಸವನಗುಡಿ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಕಾಂ ಪದವಿ ಪರೀಕ್ಷೆಯಲ್ಲಿ 5 ಚಿನ್ನದ ಪದಕಗಳನ್ನು ಪಡೆದಿದ್ದರು. 2018 19ನೇ ಸಾಲಿನಲ್ಲಿ ಬೆಂಗಳೂರು ವಿವಿ ನಡೆಸಿದ ಎಂ.ಕಾಂ ಪರೀಕ್ಷೆಯಲ್ಲೂ 5 ಬಂಗಾರದ ಪದಕಗಳನ್ನು ಬಾಚಿಕೊಂಡಿದ್ದರು.
ಪುತ್ರಿಯ ಸಾಧನೆಯ ಹಿಂದೆ ಹಗಲು ರಾತ್ರಿ ಎನ್ನದೇ ಟೈಲರ್ ವೃತ್ತಿ ಮಾಡಿ ವಿದ್ಯಾಭ್ಯಾಸ ಕೊಡಿಸಿದ ದರ್ಜಿ ದಂಪತಿಗಳ ಶ್ರಮ ಅಧಿಕವಾಗಿದೆ. ಮಗಳ ಕನಸನ್ನು ನನಸು ಮಾಡಲು ಪಣತೊಟ್ಟು ನಿಂತ ತಂದೆ-ತಾಯಿಗಳಿಗೆ ಇಂದು ಹೆಮ್ಮೆಯಾಗಿದ್ದು ಅವರ ಕಣ್ಣಾಲಿಗಳು ತುಂಬಿ ಬಂದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿ.ಶಿಲ್ಪಾ ಅವರು, ತಂದೆ ತಾಯಿ ಹಗಲು ರಾತ್ರಿ ಕಷ್ಟ ಪಡುವುದನ್ನು ಕಂಡು ವಿದ್ಯಾರ್ಥಿ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಠ ಹುಟ್ಟಿತು. ಹೀಗಾಗಿ ಸಮಯ ಸಿಕ್ಕಾಗಲೆಲ್ಲಾ ದಿನಪತ್ರಿಕೆಗಳಲ್ಲಿ ಬರುವ ವಿದ್ಯಾರ್ಥಿ ಗೈಡ್ ಓದುತ್ತಿದ್ದೆ. ಹೆಜ್ಜಾಲದ ಜುಟ್ಟನಪಾಳ್ಯದಿಂದ ಬೆಂಗಳೂರಿನ ಕಾಲೇಜಿಗೆ ಬಸ್ನಲ್ಲಿ ಪ್ರಯಾಣಿಸುವಾಗ 3 ಗಂಟೆಗಳ ಅವಧಿಯನ್ನು ಓದಿಗಾಗಿ ಮೀಸಲಿಡುತ್ತಿದ್ದೆ. ಮುಂದೆ ಐಎಎಸ್ ಮಾಡುವ ಕನಸಿದೆ. ನೇರ ಐಎಎಸ್ ಅಧಿಕಾರಿ ಆಗಲು ಪ್ರಯತ್ನಿಸುತ್ತೇನೆ.