ರಾಮನಗರ: ಪಕ್ಷ ಸಂಘಟನೆ ಉದ್ದೇಶದಿಂದ ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೃಹತ್ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ.ಜಾತಿ ವಿಭಾಗದ ಅಧ್ಯಕ್ಷ ಧರ್ಮಸೇನಾ ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದವಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸಂಘಟನೆ ದೃಷ್ಟಿಯಿಂದ ಎಸ್ಸಿ, ಎಸ್ಟಿ ವಿಭಾಗದ ಮೇಲೆ ಹೆಚ್ಚಿನ ಜವಬ್ದಾರಿಯಿದೆ. ಪ್ರತಿಯೊಬ್ಬ ಪದಾಧಿಕಾರಿಯೂ ತಮ್ಮ ಜವಾಬ್ದಾರಿ ಅರಿತು ಪಕ್ಷ ಸಂಘಟನೆಯಲ್ಲಿ ತೊಡಗಬೇಕು ಎಂದರು.
ಕಾಂಗ್ರೆಸ್ ಪಕ್ಷ ದೀನ ದಲಿತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿತು. ಉಳುವವನೇ ಭೂಮಿಯ ಒಡೆಯ, ಜೀತಮುಕ್ತ ಪದ್ಧತಿ, ಮದ್ಯಪಾನ ನಿಷೇಧದಂತಹ ಮಹತ್ತರ ಕಾರ್ಯಕ್ರಮಗಳನ್ನು ನೀಡಿ ಸಮಾನತೆ ತರುವ ಕೆಲಸ ಮಾಡಿತು. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸದಾಶಿವ ಆಯೋಗ ರಚನೆಗೆ ಅಂಕಿತ ಹಾಕಿದರು. ಇಂತಹ ಒಂದೇ ಒಂದು ಕಾರ್ಯಕ್ರಮ ಬಿಜೆಪಿ ನೀಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವುದನ್ನು ಈಗಿನ ಬಿಜೆಪಿ ಸರ್ಕಾರ ಕಡಿತಗೊಳಿಸಿದೆ. ಎಸ್ ಟಿಪಿ ಅನುದಾನ ಸಂಪೂರ್ಣವಾಗಿ ಸದ್ಭಳಕೆ ಆಗುತ್ತಿಲ್ಲ. ಅಲ್ಲದೆ, ದಲಿತರನ್ನು ಇಬ್ಬಾಗ ಮಾಡುವ ಕೆಲಸಕ್ಕೆ ಮುಂದಾಗಿದೆ. ಇದರ ವಿರುದ್ಧ ಪ್ರತಿ ಹಳ್ಳಿಗಳಲ್ಲಿ ಚರ್ಚೆಯಾಗಿ ಜನರನ್ನು ಜಾಗೃತರನ್ನಾಗಿ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ನೂತನ ಅಧ್ಯಕ್ಷ ನರಸಿಂಹಯ್ಯ ಮಾತನಾಡಿ, ದೇಶದಲ್ಲಿ ಸಂವಿಧಾನ ಉಳಿಯಲು ಹಾಗೂ ಪ್ರಜಾಪ್ರಭುತ್ವ ಬಲಿಷ್ಠವಾಗಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಪಕ್ಷದ ವರಿಷ್ಠರು ನಮ್ಮೆಲ್ಲರ ಮೇಲೆ ನಂಬಿಕೆಯಿಟ್ಟು ಪ.ಜಾತಿ ವಿಭಾಗದಲ್ಲಿ ಗೌರವಯುತ ಹುದ್ದೆಗಳನ್ನು ನೀಡಿದ್ದಾರೆ. ಅವರ ನಂಬಿಕೆಗೆ ಚ್ಯುತಿ ಬಾರದಂತೆ ತನುಮನ ಅರ್ಪಿಸಿ ಪರ ಸಂಘಟನೆಗಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ನುಡಿದರು.
ಪ.ಜಾತಿ ವಿಭಾಗದ ನಿರ್ಗಮಿತ ಅಧ್ಯಕ್ಷ ರಾಂಪುರ ನಾಗೇಶ್ ಮಾತನಾಡಿ, ಕಾಂಗ್ರೆಸ್ ಜನಪ್ರತಿನಿಧಿಗಳು ಹಾಗೂ ಹಿರಿಯರ ಸಹಕಾರ ಪಡೆದು ಶಕ್ತಿ ಮೀರಿ ಪಕ್ಷ ಸಂಘಟನೆ ಮಾಡಿದೆ. ನನಗೆ ನೀಡಿದ್ದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಸಾರ್ಥಕ ಭಾವನೆ ಇದೆ ಎಂದರು.
ಆರಂಭದಲ್ಲಿ ಎಸ್ಸಿ-ಎಸ್ಟಿ ವಿಭಾಗದ ಬಗ್ಗೆ ನಿರ್ಲಕ್ಷ ಭಾವನೆ, ಕೊಂಕು ಮಾತುಗಳು ಕೇಳಿ ಬಂದವು. ಅದೆಲ್ಲವನ್ನು ಮೀರಿ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿದೆ. ಅದರ ಪರಿಣಾಮ ಇಂದು ಎಸ್ಸಿ ಎಸ್ಟಿ ವಿಭಾಗದಲ್ಲಿ ಪದಾಧಿಕಾರಿಯಾಗಲು ಪೈಪೋಟಿ ಆರಂಭಗೊಂಡಿದೆ. ಇದಕ್ಕೆ ನಾಯಕರು ನೀಡಿದ ಶಕ್ತಿ ಮತ್ತು ಅವಕಾಶ ಕಾರಣ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮಾತನಾಡಿ, ದೇಶದಲ್ಲಿ ಸಂವಿಧಾನವನ್ನು ಬದಿಗೆ ಸರಿಸಿ ಮನುಧರ್ಮ ಜಾರಿಗೆ ತರಲು ಬಿಜೆಪಿ ಹೊರಟಿದೆ. ಇಂತಹ ದೇಶ ದ್ರೋಹಿಗಳಿಗೆ ಪ್ರಜ್ಞಾವಂತರು ಕಾಂಗ್ರೆಸ್ ಬೆಂಬಲಿಸುವ ಮೂಲಕ ಉತ್ತರ ನೀಡಬೇಕು. ದೇಶ ಉಳಿಯಬೇಕಾದರೆ ಕಾಂಗ್ರೆಸ್ ಆಡಳಿತಕ್ಕೆ ಬರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸದ ಡಿ.ಕೆ.ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಕೆ.ರಾಜು, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಮುನಿರಾಜು, ಮುಖಂಡರಾದ ಪ್ರಸನ್ನ ಪಿ.ಗೌಡ, ಕೆ.ಶೇಷಾದ್ರಿ, ಗಾಣಕಲ್ ನಟರಾಜ್ ಎಲ್.ಎನ್.ಸ್ವಾಮಿ, ಬಿಡದಿ ಪುರಸಭೆ ಸದಸ್ಯ ರಾಮಚಂದ್ರಯ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.