ರಾಮನಗರ: ರಾಮನಗರ ಜಿಲ್ಲೆಯ ಮಾಗಡಿಯ ಕಂಚುಗಲ್ ಬಂಡೆ ಮಠದ ಬಸವಲಿಂಗ ಶ್ರೀ ಸ್ವಾಮೀಜಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಪೊಲೀಸರು 216 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ ಎಂದು ರಾಮನಗರ ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ. ಚಾರ್ಜ್ ಶೀಟ್ ಪ್ರಕಾರ, ಈ ಪ್ರಕರಣದಲ್ಲಿ ನಾಲ್ವರು ಭಾಗಿಯಾಗಿದ್ದು, ಮೂವರನ್ನು ಬಂಧಿಸಲಾಗಿದೆ.
ವೀಡಿಯೊ ಎಡಿಟ್ ಮಾಡಿದ್ದ ನಾಲ್ಕನೇ ಆರೋಪಿ ಬಿ.ಸಿ.ಸುರೇಶ್ ನನ್ನು ಇನ್ನೂ ಬಂಧಿಸಲಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 72 ಸಾಕ್ಷಿಗಳನ್ನು ಪರಿಗಣಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತ ಸ್ವಾಮೀಜಿ ಅವರು ಎರಡು ಡೆತ್ ನೋಟ್ ಗಳನ್ನು ಬರೆದಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ, ಒಂದು ಮಠಕ್ಕಾಗಿ ಮತ್ತು ಮತ್ತೊಂದು ಪೊಲೀಸರಿಗಾಗಿ. ಈ ವರ್ಷದ ಫೆಬ್ರವರಿಯಲ್ಲಿ ಸ್ವಾಮೀಜಿ ವಿರುದ್ಧ ಪಿತೂರಿ ನಡೆದಿತ್ತು. ವೀಡಿಯೊ ಕರೆಗಳನ್ನು ಏಪ್ರಿಲ್ ತಿಂಗಳಲ್ಲಿ ರೆಕಾರ್ಡ್ ಮಾಡಲಾಗಿದೆ. ಕಿರುಕುಳದಿಂದ ಬೇಸತ್ತು ಅಕ್ಟೋಬರ್ 24ರಂದು ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ಸಂತೋಷ್ ಬಾಬು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಚಾರ್ಜ್ ಶೀಟ್ ನಲ್ಲಿ ನೀಲಾಂಬಿಕೆ ಎಂಬ ಯುವತಿ ಮತ್ತು ಎಂಜಿನಿಯರಿಂಗ್ ಓದುತ್ತಿರುವ ಭಕ್ತೆಯ ಪಾತ್ರವನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಆರೋಪಿ ಮಹಿಳೆ ತನ್ನನ್ನು ಅವಮಾನಿಸಿದ್ದಕ್ಕಾಗಿ ಮೃತ ಸ್ವಾಮೀಜಿಯ ವಿರುದ್ಧ ತೀವ್ರ ದ್ವೇಷ ಸಾಧಿಸಿದ್ದಾಳೆ. ಮತ್ತೊಬ್ಬ ಮಠಾಧೀಶರು ಸೇರಿದಂತೆ ಇತರ ಆರೋಪಿಗಳೊಂದಿಗೆ ಶಾಮೀಲಾಗಿ ಆಕೆ ಹನಿಟ್ರ್ಯಾಪ್ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.