ರಾಮನಗರ: ಕನ್ನಡದಲ್ಲಿ ಪ್ರಶ್ನೆ ಕೇಳಿದಕ್ಕೆ ಹಿಂದಿಯಲ್ಲಿ ಮಾತನಾಡಿ ಎಂದು ಎದುರುತ್ತರ ನೀಡಿದ ಟೋಲ್ ಮ್ಯಾನೇಜರ್ಗೆ ವೈದ್ಯರೊಬ್ಬರು ಕ್ಲಾಸ್ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆದಿದೆ.
ವೈದ್ಯ ಡಾ.ಸೈಯದ್ ವಸೀಂ ಎಂಬುವರು ಟೋಲ್ ಪ್ಲಾಜಾದ ಸಿಬ್ಬಂದಿ ಹಿಂದಿಯಲ್ಲಿ ಕೇಳಿದ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ್ದಾರೆ. ಈ ವೇಳೆ ಹಿಂದಿ ಮೇ ಬಾತ್ ಕರೋ ಎಂದು ಟೋಲ್ ಮ್ಯಾನೇಜರ್ ಅವಾಜ್ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ವೈದ್ಯ ವಸೀಂ ಕರ್ನಾಟಕದಲ್ಲಿ ಕನ್ನಡ ಮಾತನಾಡಿ, ನೀವು ಕನ್ನಡ ಕಲಿಯಿರಿ, ನಾನು ಕನ್ನಡದಲ್ಲಿಯೇ ಪ್ರಶ್ನೆ ಕೇಳುತ್ತೇನೆ. ನಿಮಗೆ ಕನ್ನಡ ಮಾತನಾಡಲು ಬರೋದಿಲ್ಲವಾದರೆ ಕನ್ನಡಿಗರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕೇಳಿ ತಿಳಿದುಕೊಳ್ಳಿ ಎಂದು ಪಾಠ ಮಾಡಿದರು.
ಈ ಸಂದರ್ಭದಲ್ಲಿ ವೈದ್ಯ ಸೈಯದ್ ವಸೀಂ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಮೊದಲ ಬಾರಿಗೆ ಈ ಎಕ್ಸ್ಪ್ರೆಸ್ ವೇನಲ್ಲಿ ಸಂಚಾರ ಮಾಡುತ್ತಿದ್ದೇನೆ. ಟೋಲ್ ದರ ಹೆಚ್ಚಳ ಮಾಡಿರುವುದು ನನಗೆ ಗೊತ್ತಿಲ್ಲ. ನಾನು ಈಗಾಗಲೇ ಮೂರು ಟೋಲ್ಗಳನ್ನು ದಾಟಿ ಬಂದಿದ್ದೇನೆ. ಮನೆಯಲ್ಲಿ ಫಾಸ್ಟ್ ಟ್ಯಾಗ್ ಬಿಟ್ಟು ಬಂದಿದ್ದು ಮೂರು ಟೋಲ್ಗಳಲ್ಲಿ ಫಾಸ್ಟ್ ಟ್ಯಾಗ್ ನಂಬರ್ ಹೇಳಿದ್ದಕ್ಕೆ ಹಣ ಪಾವತಿ ಮಾಡಿಕೊಂಡರು. ಆದರೆ ಇಲ್ಲಿ ವಿರೋಧ ಮಾಡುತ್ತಿದ್ದಾರೆ.
ನನ್ನಿಂದ ದುಪ್ಪಟ್ಟು ಹಣ ಪಡೆದಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಅಧಿಕಾರಿಗಳು ಅವಾಜ್ ಹಾಕುತ್ತಾರೆ. ನಂಬರ್ ಹೇಳಿದರೆ ಆಗುವುದಿಲ್ಲ ಹಣ ಕೊಟ್ಟು ಹೋಗಿ ಎಂದು ಹೇಳುತ್ತಾರೆ. 165ರೂ ಬದಲಿಗೆ 330 ರೂ ಪಡೆದಿದ್ದಾರೆ. ಜನರಿಗೆ ಇವರು ತುಂಬಾ ಅನ್ಯಾಯ ಮಾಡುತ್ತಿದ್ದಾರೆ. ಸರಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ವೈದ್ಯ ವಸೀಂ ಮನವಿ ಮಾಡಿದರು.