ರಾಮನಗರ: ಸಂವಿಧಾನ ಬದ್ಧವಾಗಿ ಚುನಾವಣೆ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಎಚ್.ಎ.ಇಕ್ಬಾಲ್ ಹುಸೇನ್ ಅವರ ವಿರುದ್ದ ಜೆಡಿಎಸ್ ಕಾರ್ಯಕರ್ತರು ಸೋಲಿನ ಹತಾಶೆಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೂ ಆದ ಜಿಲ್ಲಾ ದಲಿತಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮುಖಂಡ ರೈಡ್ ನಾಗರಾಜುರವರು ಶಾಸಕರಾದ ಇಕ್ಬಾಲ್ ಹುಸೇನ್ ಅವರ ಬಗ್ಗೆ ತೇಜೋವಧೆ ಮಾಡುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ. ಅವರ ಎಲ್ಲಾ ಹೇಳಿಕೆಯನ್ನು ಹಿಂಪಡೆಯುವುದರ ಜತೆಗೆ, ಬೇಷರತ್ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಠಾಚಾರ ಮಿತಿ ಮೀರಿದೆ. ರೈತರು ಹಾಗೂ ಸಾರ್ವಜನಿಕರು ಲಂಚ ನೀಡದೆ ಕೆಲಸ ಮಾಡಿಸಿಕೊಳ್ಳುವುದು ಅಸಾಧ್ಯವಾಗಿದೆ. ಇಂತಹ ಸನ್ನಿವೇಶದಲ್ಲಿ ಹಳಿ ತಪ್ಪಿರುವ ಆಡಳಿತವನ್ನು ಸರಿದಾರಿಗೆ ತರುವ ಸಲುವಾಗಿ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿರುವ ಇಕ್ಬಾಲ್ ಹುಸೇನ್ರವರು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಬುದ್ದಿವಾದ ಹೇಳಿದ್ದಾರೆ. ಶಾಸಕರ ವರ್ತನೆಯ ಬಗ್ಗೆ ಯಾರೂ ದೂರು ನೀಡಿಲ್ಲ. ಆದರೆ ಜೆಡಿಎಸ್ ಮುಖಂಡರಿಗೆ ಮಾತ್ರ ನೋವಾಗಿರುವುದು ಏಕೆ? ಎಂದು ಪ್ರಶ್ನಿಸಿದರು. ಭ್ರಷ್ಟಾಚಾರ ನಿಯಂತ್ರಣಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಗುಡ್ಡೆ ವೆಂಕಟೇಶ್ ಮಾತನಾಡಿ, ಶಾಸಕರ ವಿರುದ್ಧ ಮಾತನಾಡುತ್ತಿರುವ ರೈಡ್ ನಾಗರಾಜು ಅವರು ಹಿಂದೆ ಸಿಂಗಲ್ ನಂಬರ್ ಲಾಟರಿ ಹಾಗೂ ಎರಡನೇ ದರ್ಜೆ ಮದ್ಯಮಾರಾಟವನ್ನು ಮಾಡುತ್ತಿದ್ದ ಇಂತಹ ವ್ಯಕ್ತಿ ಶಾಸಕರ ವಿರುದ್ಧ ಮಾತನಾಡುತ್ತಿರುವುದು ತರವಲ್ಲ. ಈತನಿಗೆ ಸರಿಯಾಗಿ ವಿದ್ಯಾಬ್ಯಾಸವೂ ಇಲ್ಲ. ವಿವೇಚನೆ ಇಲ್ಲದ ನಾಗಲಿಗೆ ಹರಿಯ ಬಿಡುತ್ತಿದ್ದಾನೆ. ಹಾಗಾಗಿ ಇವರ ಹೇಳಿಕೆಯು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ಹಾಗಾಗಿ ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಹೇಳಿದರು.
ಶಾಸಕರ ವಿರುದ್ಧ ಮಾತನಾಡಿರುವ ರೈಡ್ ನಾಗರಾಜು ಅವರು, ಕೋವಿಡ್ ಸಮಯದಲ್ಲಿ ಇಕ್ಬಾಲ್ ಹುಸೇನ್ ಅವರ ಬಳಿ ೫೦೦ಕ್ಕೂ ಹೆಚ್ಚಿನ ಅಕ್ಕಿ ಚೀಲವನ್ನು ಪಡೆದುಕೊಂಡಿದ್ದರು. ಜನರ ಸೇವೆ ಮಾಡಲು ಹುಸೇನ್ ಅವರ ಬಳಿ ಸಹಾಯ ಪಡೆದು ಮತ್ತೇ ಅವರನ್ನು ದೂಷಿಸುತ್ತಿರುವುದು ತರವಲ್ಲ. ಶ್ರೀರಾಮನ ಪಕ್ಕದಲ್ಲಿ ಆಂಜನೇಯ ಮತ್ತು ಲಕ್ಷ್ಮಣ ಕೂಡ ಇರುತ್ತಾರೆ ಎಂಬುದನ್ನು ಅವರು ಮರೆಯಬಾರದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಶಂಕರ್, ಶಿವಪ್ರಕಾಶ್, ಎಲ್.ಚಂದ್ರು, ಶ್ರೀನಿವಾಸ್, ಸಂದೇಶ್, ನರಸಿಂಹ, ಕಬ್ಬಡ್ಡಿ ವಿಜಯ್, ಮಣಿಕಂಠ ಹಾಗೂ ರಾಜೇಶ್ ಮತ್ತಿತರು ಹಾಜರಿದ್ದರು.