ರಾಮನಗರ: ಪಡಿತರ ವಿತರಣೆಯಲ್ಲಿ ಮೋಸ ಮಾಡುತ್ತಿರುವ ಬೂದಿಗುಪ್ಪೆ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ನಿಗ್ರಹ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ನಗರದ ಹೊರವಲಯದ ಬೂದಿಗುಪ್ಪೆ ಗ್ರಾಮದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯಲ್ಲಿ ಪಡಿತರ ಫಲಾನುಭವಿಗಳಿಗೆ ಮೋಸ ಮಾಡುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೆ ವಿತರಿಸಲು ಸರ್ಕಾರವು ೧೦ ಕೆಜಿ ಅಕ್ಕಿಯನ್ನು ನಿಗದಿಪಡಿಸಿದೆ. ಆದರೆ ಬೂದಿಗುಪ್ಪೆ ನ್ಯಾಯಬೆಲೆ ಅಂಗಡಿಯಲ್ಲಿ 10 ಕೆ.ಜಿ.ಯ ಬದಲು ತಲಾ 8 ಕೆ.ಜಿ. ವಿತರಣೆ ಮಾಡುತ್ತಿದ್ದು, ಪಡಿತರ ಚೀಟಿದಾರರಿಗೆ ಮೋಸ ಮಾಡಿ ಫಲಾನುಭವಿಗಳಿಂದ 10 ರೂ.ಗಳ ಲಂಚವನ್ನು ಅಕ್ರಮವಾಗಿ ಪಡೆದಿದ್ದಾರೆ.
ನ್ಯಾಯಬೆಲೆ ಅಂಗಡಿಯಲ್ಲಿ ಯಾವ ವಸ್ತುಗಳನ್ನು ವಿತರಿಸಲಾಗುತ್ತಿದೆ ಎಂಬ ಬಗ್ಗೆ ಯಾವುದೇ ಐಟಂ ಬೋರ್ಡ್ ಹಾಕದೆ ಪ್ರತಿ ತಿಂಗಳು ಜನರನ್ನು ವಂಚಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ತನಿಖೆ ಮತ್ತು ಕಾನೂನು ಶಿಸ್ತು ಕ್ರಮ ಕೈಗೊಳ್ಳುವಂತೆ ಅವರು ತಮ್ಮ ದೂರಿನಲ್ಲಿ ಕೋರಿದ್ದಾರೆ.