ರಾಮನಗರ: ಕಸ ಸುರಿಯಲು ಹೋಗಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಆತ ತೀವ್ರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಬಿಳಗುಂಬ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕರಡಿ ದಾಳಿಯಿಂದ ಗಾಯಗೊಂಡ ರೈತ ಹನುಮಂತಯ್ಯ ಎಂಬುವರನ್ನು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಳಗಿನ ಜಾವ ಎಂದಿನಂತೆ ಹನುಮಂತಯ್ಯ ಗ್ರಾಮದ ಹೊರಗಿನ ತಿಪ್ಪೆಗೆ ಕಸ ಸುರಿಯಲು ತೆರಳಿದ್ದರು. ಈ ವೇಳೆ ಆಹಾರ ಹರಸಿ ಎರಡು ಮರಿಗಳೊಂದಿಗೆ ಬಂದಿದ್ದ ಕರಡಿ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ಹನುಮಂತಯ್ಯ ಅವರ ಚೀರಾಟ ಕೇಳಿದ ನೆರೆ ಹೊರೆಯವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕರಡಿ ಪರಾರಿಯಾಗಿದೆ.
ಕರಡಿ ದಾಳಿಯಿಂದ ಕೈ ಕಾಲು ಮತ್ತು ಮೈಮೇಲೆ ತೀವ್ರ ಸ್ವರೂಪದ ಗಾಯಗಳಾಗಿದ್ದು ರಕ್ತದ ಮಡುವಿನಲ್ಲಿದ್ದ ಹನುಮಂತಣ್ಣ ಅವರನ್ನು ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಗಾಯಾಳುವಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.