ಚನ್ನಪಟ್ಟಣ: ಕೀಟನಾಶಕವನ್ನು ಜ್ಯೂಸ್ ಎಂದು ಕುಡಿದು ಪುಟ್ಟ ಕಂದಮ್ಮವೊಂದು ಬಾರದ ಲೋಕಕ್ಕೆ ತೆರಳಿದ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಯಶ್ವಿಕ್ (2) ದುರಂತ ಅಂತ್ಯ ಕಂಡ ಕಂದಮ್ಮ.
ಗ್ರಾಮದ ಪುಷ್ಪ ಹಾಗೂ ಹನುಮಂತ ಎಂಬ ದಂಪತಿ ಪುತ್ರನಾದ ಯಶ್ವಿಕ್, ತನ್ನ ಮನೆಯಲ್ಲಿದ್ದ ಕೀಟನಾಶಕವನ್ನು ಜ್ಯೂಸ್ ಎಂದು ತಿಳಿದು ಸೇವಿಸಿದೆ. ಕಂದಮ್ಮನ ತಂದೆ, ತನ್ನ ಬೆಳೆಗೆ ಕೀಟನಾಶಕವನ್ನು ಸಿಂಪಡಿಸಲು ದ್ರಾವಕವನ್ನು ತಂದಿದ್ದರು. ಬಾಕಿ ಉಳಿದಿದ್ದ ಔಷಧಿಯನ್ನು ಬಾಟಲಿಯೊಂದಕ್ಕೆ ಹಾಕಿ ಇಟ್ಟಿದ್ದರು. ಈ ವೇಳೆ ಈ ಬಾಟಲಿಯಲ್ಲಿ ಇರುವುದು ಜ್ಯೂಸ್ ಎಂದು ಭಾವಿಸಿದ ಮಗು ಕೀಟನಾಶಕವನ್ನು ಸೇವಿಸಿದೆ.
ಕೀಟನಾಶಕವನ್ನ ಕುಡಿದ ತಕ್ಷಣ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಗುವನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಉಸಿರುಚೆಲ್ಲಿದೆ. ಪುಟ್ಟ ಕಂದಮ್ಮನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಕ್ಕಳ ಮೇಲೆ ಯಾವತ್ತೂ ಒಂದು ಕಣ್ಣಿಟ್ಟಿರಬೇಕು. ಇಲ್ಲಾಂದ್ರೆ ಕಣ್ಣು ಮುಚ್ಚಿ ತೆರೆಯೋದ್ರೊಳಗೆ ಏನಾದರೊಂದು ಅವಾಂತರಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ. ಆದರೆ ಇನ್ನೂ ಕೆಲವೆಡೆ ದುರಂತಗಳು ನಡೆದಿದ್ದಾವೆ. ಮೊಬೈಲ್ ಚಾರ್ಜರ್ ಬಾಯಿಗಿಟ್ಟು ಮಕ್ಕಳು ದುರಂತ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವು ಕಡೆ ಮಹಡಿಯಿಂದ ಬಿದ್ದು, ಬಕೆಟ್ ನೀರಿಗೆ ಬಿದ್ದು ಅಸುನೀಗಿರುವ ಘಟನೆಗಳು ಅದೆಷ್ಟೋ ನಡೆದಿದ್ದಾವೆ.