ರಾಮನಗರ: ದಿನದಿಂದ ದಿನಕ್ಕೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸರ್ಕಾರ 15 ದಿನ ಶಾಲಾ-ಕಾಲೇಜುಗಳನ್ನು ಬಂದ್ ಮಾಡಬೇಕು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಶಾಲಾ-ಕಾಲೇಜು ಹಾಗೂ ವಸತಿ ಶಾಲೆಗಳಲ್ಲಿ ಕರೊನಾ ಪ್ರಕರಣ ಹೆಚ್ಚಾಗ್ತಿದೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮತ್ತು ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಜೀವಕ್ಕೆ ತೊಂದರೆ ಇಲ್ಲದಿದ್ರೂ ಪ್ಯಾನಿಕ್ ಆಗ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳನ್ನ ಬಂದ್ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ರಜೆ ಕೊಟ್ಟು ವಸತಿ ಶಾಲೆಗಳನ್ನು ಬಂದ್ ಮಾಡಬೇಕು. ನಿಮ್ಮ ಮುಂದೆ ವಾಸ್ತವಾಂಶದ ವರದಿ ಇದೆ. ಆ ಮಾಹಿತಿಗಳ ಆಧಾರದ ಮೇಲೆ ನೀವು ನಿರ್ಣಯ ತೆಗೆದುಕೊಳ್ಳಬೇಕು. ಈಗಾಗಲೇ ಅನೇಕ ಶಾಲಾ-ಕಾಲೇಜುಗಳಲ್ಲಿ ಪಾಸಿಟಿವ್ ರೇಟ್ ಜಾಸ್ತಿಯಾಗಿದೆ.
ಲಾಕ್ಡೌನ್ ವಿಚಾರದಲ್ಲಿ ಬಿಜೆಪಿ ನಾಯಕರಲ್ಲೇ ಸಮನ್ವಯತೆ ಇಲ್ಲ. ಸಾರ್ವಜನಿಕರ ಒಂದು ವರ್ಗ ಪ್ರತಿನಿತ್ಯ ವ್ಯಾಪಾರ ಹಾಗೂ ಕೂಲಿ ಕೆಲಸ ಮಾಡುತ್ತಾರೆ. ಅಂತಹವರ ಕುಟುಂಬದ ನಿರ್ವಹಣೆ ಅವರ ಒಂದು ದಿನದ ಆದಾಯದ ಮೇಲೆ ನಿಂತ್ತಿರುತ್ತೆ. ವಿಕೇಂಡ್ ಕರ್ಫ್ಯೂ ಇಲ್ಲ, ವಿಕೇಂಡ್ ಲಾಕ್ಡೌನ್ ಮಾಡುವುದರಿಂದ ಅಂತಹವರಿಗೆ ಕಷ್ಟ ಆಗುತ್ತೆ. ಅವರಿಗೆಲ್ಲ ಬದುಕು ಕಟ್ಟುವುದು ಸರ್ಕಾರದ ಜವಬ್ದಾರಿ. ಈ ಮಾತನ್ನ ವಿರೋಧ ಪಕ್ಷದ ನಾವು ಹೇಳಿದ್ರೆ ಅವರಿಗೇನು ಮಾತನಾಡುತ್ತಾರೆ ಎಂದು ನಮ್ಮ ಮೇಲೆ ಆರೋಪ ಮಾಡುತ್ತಾರೆ. ನಾವು ಕೂಡ ಸರ್ಕಾರ ನಡೆಸಿದವರೇ. ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಬೇಕೆಂಬುದು ನಮ್ಮ ಉದ್ದೇಶ ಅಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು