ರಾಮನಗರ : ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬಾರದೆಂದು ಸರ್ಕಾರವನ್ನು ಒತ್ತಾಯಿಸಿ ಕ್ರೈಸ್ತ ಸಮುದಾಯ ಮತ್ತು ಪಾದ್ರಿಗಳ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಖಂಡಿಸಿ ಅಖಿಲ ಭಾರತ ಕ್ರೈಸ್ತ ಮಹಾಸಭಾದ ಆಶ್ರಯದಲ್ಲಿ ಕ್ರಿಶ್ಚಿಯನ್ ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿರುವ ಜಿಲ್ಲಾ ಕಚೇರಿಗಳ ಸಂಕಿರ್ಣದ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆಯಿಂದ ಕೋಮು ಸಂಘರ್ಷಕ್ಕೆ ಪುಷ್ಠಿ ನೀಡಿದಂತಾಗುತ್ತದೆ. ರಾಜ್ಯ ಅಶಾಂತಿ ಮತ್ತು ಅಸಮಾಧಾನದ ಗೂಡಲಾಗಲಿದೆ. ಹೀಗಾಗಿ ಬಲವಂತದ ಮತಾಂತರವನ್ನು ಕ್ರೈಸ್ತ ಸಮುದಾಯ ವಿರೋಧಿಸುತ್ತದೆ. ಇಡೀ ರಾಜ್ಯದಲ್ಲಿ ಒಂದೇ ಒಂದು ಮತಾಂತರದ ದೂರು ದಾಖಲಾಗಿಲ್ಲ. ಆದರೆ ಕ್ಷುಲ್ಲಕ ಮತ್ತು ಸುಳ್ಳು ಘಟನೆಗಳನ್ನು ಆಧರಿಸಿ ಕ್ರೈಸ್ತ ಸಮುದಾಯವನ್ನು ದೂರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈಗಾಗಲೇ 9 ರ್ಯಾಲಿಗಳನ್ನು ಹಮ್ಮಿಕೊಳ್ಳಲಾಗಿದ್ದು 18 ಜಿಲ್ಲೆಗಳು ಹಾಗೂ 47 ತಾಲೂಕುಗಳಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸದನದಲ್ಲಿಯೂ ಚರ್ಚೆಗಳಾಗಿ ಕ್ರೈಸ್ತ ಸಮುದಾಯವನ್ನು ಆಧಾರ ರಹಿತವಾಗಿ ದೂಷಿಸಲಾಗುತ್ತಿದೆ. ನಾವು ಭಾರತೀಯರಲ್ಲ ಎಂಬಂತೆ ಬಿಂಬಿಸಲಾಗುತ್ತಿದೆ. ಇದರಿಂದ ಜನರಲ್ಲಿ ಗೊಂದಲ ಉಂಟಾಗಿದೆ. ದೇಶದ ಪ್ರತಿಯೊಬ್ಬರಿಗೂ ಅವರವರ ಧರ್ಮವೇ ಅವರ ಹಕ್ಕಾಗಿದೆ. ಶಾಂತಿ ಪ್ರಿಯರಾದ ಕ್ರೈಸ್ತರನ್ನು ಇಂದು ಬೀದಿಗೆ ತಳ್ಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಚರ್ಚ್ಗಳು ಮತ್ತು ಕ್ರೈಸ್ತ ಸಮುದಾಯಕ್ಕೆ ಸೇರಿದ ಸಂಘ-ಸಂಸ್ಥೆಗಳ ಗಣತಿ ನಡೆಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ. ಈ ಗಣತಿಯ ಉದ್ದೇಶ ಏನು ಮತ್ತು ಗುರಿ ಏನು? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ರಾಜ್ಯ ಸರ್ಕಾರ ಒಂದು ಸಮುದಾಯವನ್ನು ಗುರಿಯಾಗಿಸಿದೆ ಎಂಬ ಅನುಮಾನ ಕಾಡುತ್ತಿದೆ. ಹೀಗಾಗಿ ಸರ್ಕಾರ ತನ್ನ ಸಮೀಕ್ಷೆ ಆದೇಶದ ಉದ್ದೇಶವನ್ನು ಜನರಿಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಮತ್ತು ಗ್ರಾಮೀಣ ಪ್ರದೇಶದಲ್ಲಿನ ಚರ್ಚ್ಗಳ ಮೇಲೆ ಹಾಗೂ ಪಾದ್ರಿಗಳ ಮೇಲೆ ಹಲ್ಲೆ ಮತ್ತು ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದೆ. ಚರ್ಚ್ಗಳಲ್ಲಿ ಇರುವ ಪವಿತ್ರ ಸಂಸ್ಕರಣ ವಸ್ತುಗಳನ್ನು ಧ್ವಂಸ ಮಾಡಲಾಗುತ್ತಿದೆ. ಪವಿತ್ರ ಬೈಬಲ್ ಅನ್ನು ಹರಿದು ಹಾಕುವುದು, ಆರಾಧನೆಯನ್ನು ಭಗ್ನಗೊಳಿಸಿ, ಧರ್ಮ ಗುರುಗಳಾದ ಸಭಾಪಾಲಕರನ್ನು ಅವಾಚ್ಯ ಶಬ್ಧಗಳಿಂದ ಬೈಯುವುದು, ದೈಹಿಕ ಹಲ್ಲೆ ನಡೆಸುವ ಪ್ರಕರಣಗಳು ನಡೆಯುತ್ತಲೇ ಇದೆ ಆದರೆ ಈ ಬಗ್ಗೆ ದೂರು ಕೊಟ್ಟರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಾದ್ರಿ ಅಲೆಕ್ಸಾಂಡರ್ ಅಯ್ಯ, ಕ್ರಿಶ್ಚಿಯನ್ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಪ್ರಜ್ವಲ್ ಸ್ವಾಮಿ, ಅಭಿಷೇಕ್ ದೇವಾ, ನವೀನ್ ಜೋಸೆಫ್, ನವ್ಯ ರಮೇಶ್, ಡಿವಿಡ್ ರಾಜು, ಜಾಕೋಬ್, ಟಿ.ಜಾನ್, ಫ್ರಾಂಕ್ಲಿನ್ ಪ್ರದೀಪ್, ವೆಂಕಟರಾಮನ್, ಮೋಹನ್, ಜೋಸೆಫ್, ಜಾನ್ ಸೇರಿದಂತೆ ನಾನಾ ಚರ್ಚ್ಗಳ ಪಾದ್ರಿಗಳು, ನೂರಾರು ಸಂಖ್ಯೆಯ ಕ್ರೈಸ್ತರು ಭಾಗವಹಿಸಿದ್ದರು.