ರಾಮನಗರ: ಮೇಕೆದಾಟು ವಿಚಾರದಲ್ಲಿ ಯಾರ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ಕೂಡಲೇ ಯೋಜನೆಗೆ ಅನುಮತಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.
ಕನಕಪುರದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಅವರು ಮಾತನಾಡಿದ ಅವರು ಕುಡಿಯುವ ನೀರಿನ ಯೋಜನೆಗೆ ಯಾರ ಅನುಮತಿಯೂ ಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ತಮಿಳುನಾಡಿನವರು ಈ ವಿಚಾರಕ್ಕೆ ರಾಜಕೀಯ ಮಾಡುತ್ತಲೇ ಬಂದಿದ್ದಾರೆ. ಅವರು ಇದಕ್ಕೆ ಒಪ್ಪುವುದೂ ಇಲ್ಲ ಎಂದರು.
ಮೇಕೆದಾಟು ವಿಚಾರದಲ್ಲಿ ನಾವೇನು ಮಾಡುವ ಹಾಗಿಲ್ಲ. ಮಾತುಕತೆ ಮೂಲಕವೇ ಎರಡೂ ರಾಜ್ಯಗಳು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವರು ಹೇಳಿರುವುದು ಖಂಡನೀಯ.
ಕೇಂದ್ರ ಸಚಿವರು ಹೀಗೆ ಮಾತನಾಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೌನವಾಗಿ ಸಮ್ಮತಿಸಿರುವುದು ಸರಿಯಲ್ಲ. ಇದು ರಾಜ್ಯಕ್ಕೆ ಆಗಿರುವ ಅವಮಾನ. ಅವರು ಕೇಂದ್ರದಿಂದ ಎನ್ಒಸಿ ಪಡೆಯಬೇಕು ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ಕುಡಿಯುವ ನೀರಿನ ಯೋಜನೆಗೆ ಅನುಮತಿ ನೀಡಬೇಕಾದದ್ದು ಕೇಂದ್ರದ ಕೆಲಸ. ನೀರಾವರಿ ಸಚಿವರು ಕೂಡಲೇ ಕಾವೇರಿ ನೀರಾವರಿ ಸಮಿತಿ ಸಭೆ ಕರೆದು ಅನುಮೋದನೆ ನೀಡಬೇಕು ಎಂದರು.