ರಾಮನಗರ: ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನನ್ನು ಹತ್ಯೆ ಮಾಡಿರುವ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡಿಯಾಲ ಕರೇನಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಕೊಲೆಯಾದ ಯುವಕ ಮೋಹನ್ಕುಮಾರ್(26) ಎಂದು ಹೇಳಲಾಗಿದ್ದು ಆತನ ತಂದೆ ಶ್ರೀನಿವಾಸ್(52) ಎಂಬಾತನೇ ಮಗನನ್ನು ಹರಿತವಾದ ಆಯುಧದಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಬುಧವಾರ ಸಂಜೆ 5ಗಂಟೆಯ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕ್ಷುಲ್ಲಕ ಕಾರಣಕ್ಕೆ ತಂದೆ ಮಗನ ನಡುವೆ ಶುರುವಾದ ಜಗಳವು ವಿಕೋಪಕ್ಕೆ ತಲುಪಿದ್ದು ಕಾದಾಟದಲ್ಲಿ ಮಗನ ಜೀವ ಬಲಿಯಾಗಿದೆ.
ತಂದೆ ಮಗ ಇಬ್ಬರೂ ಮದ್ಯ ವ್ಯಸನಿಗಳಾಗಿದ್ದು, ಕುಡಿದ ಅಮಲಿನಲ್ಲಿ ಯಾವುದೋ ಕಾರಣಕ್ಕೆ ಮೋಹನ್ಕುಮಾರ್ ತಲೆಗೆ ಆತನ ತಂದೆ ಶ್ರೀನಿವಾಸ್ ಹರಿತವಾದ ಆಯುಧದಿಂದ ಬಲವಾಗಿ ಹೊಡೆದಿದ್ದಾನೆ. ಈ ಪರಿಣಾಮ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದಾಗ ಕೆಲವು ಗ್ರಾಮಸ್ಥರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮದ್ಯೆಯೇ ಆತ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಸುದ್ದಿ ತಿಳಿದ ರಾಮನಗರ ಉಪವಿಭಾಗದ ಡಿವೈಎಸ್ಪಿ ಮೋಹನ್ಕುಮಾರ್, ಬಿಡದಿ ಸಿಪಿಐ ಆರ್.ಪ್ರಕಾಶ್ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.