ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಸುದೀರ್ಘವಾಗಿ ಆಡಳಿತ ನಡೆಸಿದರೂ ಸಹ ನಮ್ಮ ನೀರು ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿವೆ. ರಾಜ್ಯದ ಜನರು ಜೆಡಿಎಸ್ಗೆ 5 ವರ್ಷಗಳ ಅವಧಿಯ ಸಂಪೂರ್ಣ ಅಧಿಕಾರವನ್ನು ನೀಡಿದರೆ ಎಲ್ಲಾ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಬಿಡದಿಯ ಕೇತಗಾನಹಳ್ಳಿ ತಮ್ಮ ತೋಟದ ಮನೆ ಆವರಣದಲ್ಲಿ ಜನತಾ ಜಲಧಾರೆ ಕಾರ್ಯಕ್ರಮದ ನಿಮಿತ್ತ ಆಯೋಜಿಸಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಪೂರ್ವ ಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, ರಾಷ್ಟ್ರೀಯ ಪಕ್ಷಗಳು ಹಲವು ವರ್ಷಗಳ ಕಾಲ ಆಡಳಿತ ನಡೆಸಿದರೂ ಸಹ ನಮ್ಮ ಪಾಲಿನ ನೀರನ್ನು ಪಡೆಯಲು ವೈಫಲ್ಯ ಕಾಣುವ ಜತೆಗೆ ಅನೇಕ ಸಮಸ್ಯೆಗಳನ್ನು ತಂದಿಟ್ಟಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ಗೆ 5 ವರ್ಷಗಳ ಸಂಪೂರ್ಣ ಆಡಳಿತ ನಡೆಸುವ ಅವಕಾಶವನ್ನು ಜನತೆ ಒದಗಿಸಿಕೊಟ್ಟರೆ ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರ ಮೇಲ್ದಂಡೆ ಯೋಜನೆ ಸೇರಿದಂತೆ ಎಲ್ಲಾ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರದಿದ್ದರೇ ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುವ ತೀರ್ಮಾನ ಕೈಗೊಳ್ಳುವುದಾಗಿ ಘೋಷಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಜನರ ಒಲವು ಉಳಿಸಿಕೊಳ್ಳಲು ಕೇವಲ ಭರವಸೆಗಳಲ್ಲೇ ಕಾಲಹರಣ ಮಾಡಿದರು. ಆದರೆ ತಮಗೆ ದೊರೆತ ಕೇವಲ 14 ತಿಂಗಳ ಅಧಿಕಾರವಧಿದಲ್ಲಿ 25 ಸಾವಿರ ಕೋಟಿ ರೂ ರೈತರ ಸಾಲ ಮನ್ನಾ ಮಾಡಿರುವುದು ಇತಿಹಾಸದ ಪುಟಕ್ಕೆ ಸೇರಿದೆ. ತಮ್ಮ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಸುಮಾರು 13 ರಿಂದ 14 ಸಾವಿರ ರೈತ ಕುಟುಂಬಗಳಿಗೆ ಸಾಲ ಮನ್ನಾ ಮಾಡಲು ಹಣ ನೀಡಿಲ್ಲ. ಆ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.