ರಾಮನಗರ: ಯಾರು ಏನೇ ಪಿತೂರಿ ನಡೆಸಿದರೂ ಜೆಡಿಎಸ್ ಪPವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡ ಗುಡುಗಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜೆಡಿಎಸ್ ಆಯೋಜಿಸಿದ್ದ ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಈ ದೇವೇಗೌಡನಿಗೆ ನಡೆದಾಡಲು ಆಗೊಲ್ಲ, ಈತ ಏನು ಮಾಡಬಲ್ಲ ಎಂದು ಭಾವಿಸಬಹುದು. ನನಗೆ ಮಂಡಿ ನೋವು ಇದೆ ಆದರೆ, ತಲೆಯೊಳಗೆ ಯಾವ ನೋವು ಇಲ್ಲ. ಯಾವ ವಿಷಯದ ಬಗ್ಗೆ ಬೇಕಾದರು ಚರ್ಚೆ ಮಾಡಬಲ್ಲೆ ಎಂದರು.
ಕಾವೇರಿ ಜಲ ವಿವಾದ ಸಂಬಂಧ ಅಂತಿಮ ಅವಾರ್ಡ್ ಪಾಸಾದಾಗ ಕರ್ನಾಟಕಕ್ಕೆ ಅನ್ಯಾಯವಾಯಿತು. ಆಗ ತಮಿಳುನಾಡಿನ 40 ಸಂಸದರ ವಿರುದ್ಧ ನಾನು ಒಬ್ಬನೇ ಪಾರ್ಲಿಮೆಂಟ್ ನಲ್ಲಿ ಹೋರಾಟ ಮಾಡಿದೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದೆ, ಕಾಂಗ್ರೆಸ್ನ ನಾಲ್ವರು ಕೇಂದ್ರ ಸಚಿವರು, ಬಿಜೆಪಿಯ 18 ಸಂಸದರು ಇದ್ದರು. ಆದರೆ ಯಾರೋಬ್ಬರೂ ನನ್ನೊಂದಿಗೆ ಧ್ವನಿಗೂಡಿಸಲಿಲ್ಲ. ನಾವು ಮಾತನಾಡಿದರೆ ಸರ್ಕಾರವೇ ಬಿದ್ದು ಹೋಗಿ ಬಿಡುತ್ತದೆ ಎಂಬ ಕಾರಣಕ್ಕೆ ಕೇಂದ್ರದಲ್ಲಿ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೋಯ್ಲಿ, ಮುನಿಯಪ್ಪ ಸೇರಿದಂತೆ ನಾಲ್ವರು ಅಧಿಕಾರ ಉಳಿಸಿಕೊಳ್ಳಲು ಸುಮ್ಮನಾದರು ಎಂದು ವಾಗ್ದಾಳಿ ನಡೆಸಿದರು.
ವಾಜಪೇಯಿ ಕಾಲದಲ್ಲಿಯೂ ನನ್ನ ಹೋರಾಟ ನಿಲ್ಲಲಿಲ್ಲ. ಇಂಟರ್ ಸ್ಟೇಟ್ ರಿವರ್ ಡಿಸ್ಪ್ಯೂಟ್ ಆಕ್ಟ್ಗೆ ತಿದ್ದುಪಡಿ ತಂದರು. ಮೂರು ಜನ ಸದಸ್ಯರಲ್ಲಿ ಇಬ್ಬರು ಒಂದು ಕಡೆಯಾಗಿ, ಇನ್ನೊಬ್ಬರು ಒಂದು ಕಡೆಯಾದರೆ ನೀವು ಮತ್ತೆ ಮರು ಪರಿಶೀಲನೆಗೆ ಒತ್ತಾಯಿಸಬಾರದೆಂದು ವಾಜಪೇಯಿ ಹೇಳಿದ್ದರು. ಆದರೂ ನಾನು ನನ್ನ ಹೋರಾಟ ಮುಂದುವರೆಸಿದೆ ಎಂದು ಸ್ಮರಿಸಿದರು.
ರಾಗಿ ಧರ ಕಡಿಮೆಯಿದೆ ನೀವು ಖರೀದಿ ಕೇಂದ್ರವನ್ನು ತೆರೆಯದೆ ಅನ್ಯಾಯ ಮಾಡುತ್ತಿದ್ದೀರಿ ಎಂದು ಪ್ರಸ್ತಾಪಿಸಿ ಸಂಸತ್ ನಲ್ಲಿ ಹೋರಾಟ ನಡೆಸಿದೆ. ಕೇಂದ್ರ ಸರ್ಕಾರ 900 ಕೋಟಿ ಬಿಡುಗಡೆ ಮಾಡಿತು. ಪಾರ್ಲಿಮೆಂಟ್ನಲ್ಲಿ ನಾನು ಅವಮಾನ, ನೋವು ಅನುಭವಿಸಿದ್ದೇನೆ. ಆದರೂ ಬದುಕಿನ ನನ್ನ ಜನರಿಗೆ ಪೆಟ್ಟಾದಾದರೆ ನಾನು ಬಿಡಲ್ಲ, ಹೋರಾಟ ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು.
ಈಗ ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ತರುವುದಾಗಿ ಹೇಳಿ ಪಾದಯಾತ್ರೆ ಹೆಸರಿನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಎರಡನೇ ಹಂತದ ಪಾದಯಾತ್ರೆಯನ್ನು ರಾಮನಗರ ಕ್ಷೇತ್ರದಿಂದ ಹೊರಟಿದ್ದು ಏಕೆಂದು ತಿಳಿದಿಲ್ಲ. ಅವರ ಹೋರಾಟವನ್ನು ಉಲ್ಲಾಸದ ನಡಿಗೆ ಅಂತಾ ಕರೆಯಬೇಕೊ ಏನೆಂದು ಗೊತ್ತಿಲ್ಲ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಶಾಸಕರಾದ ಎ.ಮಂಜುನಾಥ್, ಅನಿತಾ ಕುಮಾರಸ್ವಾಮಿ, ಬಂಡಪ್ಪ ಕಾಶಂಪುರ್ , ಶ್ರೀನಿವಾಸ್ ಮೂರ್ತಿ, ಎಂ.ಅಶ್ವಿನ್ಕುಮಾರ್, ಸುರೇಶ್ಗೌಡ, ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ, ವಿಧಾನ ಪರಿಷತ್ ಸದಸ್ಯರಾದ ಬಿ.ಎಂ.ಫಾರೂಕ್, ತಿಪ್ಪೇಸ್ವಾಮಿ, ಬೋಜೆಗೌಡ, ಮಂಜೇಗೌಡ, ರಮೇಶ್ಗೌಡ, ಗೋವಿಂದ, ಮಾಜಿ ಸದಸ್ಯರಾದ ಶರವಣ, ಅಪ್ಪಾಜಿಗೌಡ ಮತ್ತಿತರರು ಉಪಸ್ಥಿತರಿದ್ದರು.