ರಾಮನಗರ: ಮಲೀನಗೊಂಡಿರುವ ಪುರಾತನ ಕೆರೆಯನ್ನು ಶುದ್ಧೀಕರಿಸಿ ಪರಿಸರ ಮಾಲಿನ್ಯವನ್ನು ತಡೆಯಬೇಕೆಂದು ತಾ.ಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ ಗಾಣಕಲ್ ಗ್ರಾಮದ ಸಮೀಪ ಇರುವ ಪುರಾತನ ಕೆರೆಗೆ ಆಸುಪಾಸಿನಲ್ಲಿರುವ ಗ್ರಾಮಗಳ ಚರಂಡಿ ನೀರು ಸೇರಿ ಸಂಪೂರ್ಣ ಕಲುಷಿತಗೊಂಡಿದೆ. ಹೀಗಾಗಿ ಕಳೆದ 15 ದಿನಗಳ ಹಿಂದೆ ಸಾವಿರಾರು ಮೀನುಗಳು ಸತ್ತಿದ್ದು, ನೀರಿನಲ್ಲಿ ಕೊಳೆಯುತ್ತಿರುವುದರಿಂದ ಇಡೀ ಪ್ರದೇಶವೇ ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾಂಕ್ರ್ರಾಮಿಕ ರೋಗ ಹರಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದ್ದಾರೆ.
ಗಾಣಕಲ್ ಗ್ರಾಮ ಮತ್ತು ಪಕ್ಕದ ಅಂಕನಹಳ್ಳಿ ಗ್ರಾಮಗಳ ಕಡೆಯಿಂದ ಚರಂಡಿ ನೀರು ಮತ್ತು ಇತರೆ ಮಲೀನ ನೀರು ನೇರವಾಗಿ ಈ ಕೆರೆಯನ್ನು ಸೇರುತ್ತಿದೆ. ಈ ಮೊದಲು ಕೆರೆಯ ನೀರನ್ನು ಜಾನುವಾರುಗಳು ಕುಡಿಯುತ್ತಿದ್ದವು. ಈಗ ಜಾನುವಾರುಗಳು ಕುಡಿಯದಷ್ಟು ನೀರು ಮಲೀನವಾಗಿದೆ. ಈ ಕೆರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಗಾಣಕಲ್ ಗ್ರಾಮ ಮತ್ತು ಅಂಕನಹಳ್ಳಿ ಗ್ರಾಮಗಳ ಕಡೆಯಿಂದ ಹರಿದು ಬರುತ್ತಿರುವ ಕೊಳಕು ನೀರನ್ನು ತಡೆಯಬೇಕಾಗಿದೆ.
ಕೊಳಕು ನೀರು ಕೆರೆಗೆ ಹರಿಯದಂತೆ ಪ್ರತ್ಯೇಕಗೊಳಿಸಿ ಚರಂಡಿ ಮೂಲಕ ಸಾಗುವಂತೆ ವ್ಯವಸ್ಥೆ ಮಾಡಬೇಕಾಗಿದೆ. ನೈಸರ್ಗಿಕ ನೀರು ಮಾತ್ರ ಕೆರೆ ಸೇರುವಂತೆ ಮಾಡಲು ಅಗತ್ಯವಾದ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ. ತಕ್ಷಣವೇ ಕೆರೆ ಶುದ್ಧೀಕರಣ ಮತ್ತು ಚರಂಡಿ ನೀರು ಬೇರ್ಪಡಿಸುವ ವ್ಯವಸ್ಥೆ ಕಲ್ಪಿಸಲು ಸೂಕ್ತ ಅನುದಾನವನ್ನು ಜಿಪಂ ಸಿಇಒ ಅವರು ಬಿಡುಗಡೆ ಮಾಡಬೇಕು ಎಂದು ಅವರ ಮನವಿ ಮಾಡಿದ್ದಾರೆ.
ಮನವಿಯ ಪ್ರತಿಯನ್ನು ಬನ್ನಿಕುಪ್ಪೆ (ಬಿ) ಗ್ರಾಪಂ ಪಿಡಿಒ ಮತ್ತು ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಲ್ಲಿಸಿದ್ದು, ಜಿಪಂ ಸಿಇಒ ಅವರನ್ನು ಭೇಟಿ ಮಾಡಿ ಗಮನಸೆಳೆಯುವುದಾಗಿ ಗಾಣಕಲ್ ನಟರಾಜು ತಿಳಿಸಿದ್ದಾರೆ.