ರಾಮನಗರ: ನಾನು ಆಪರೇಷನ್ ಕಮಲದ ನಿಪುಣ ಅಲ್ಲ. ಆದರೆ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷ ಸಂಘಟನೆಗೆ ಮುಂದಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿಯೂ ಪ್ರವಾಸ ಕೈಗೊಳ್ಳುತ್ತೇನೆ. ಚುನಾವಣೆಗೆ ಇನ್ನು ಒಂದು ವರ್ಷ ಇದೆ. ಅಭ್ಯರ್ಥಿಗಳ ಕುರಿತು ಪಕ್ಷ ತೀರ್ಮಾನ ಮಾಡುತ್ತದೆ. ನಾವು ನಮ್ಮ ಕೆಲಸವನ್ನು ಪ್ರಾರಂಭ ಮಾಡುತ್ತೇವೆ. ನಮ್ಮ ಪಕ್ಷ, ನನ್ನನ್ನು ಎಲ್ಲೆಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತೋ ಅಲ್ಲೆಲ್ಲಾ ನಾನು ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಅವರನ್ನು ವಿವಾಹ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದೆ. ಅಲ್ಲಿಗೆ ಮುಖ್ಯಮಂತ್ರಿಗಳು ಕೂಡ ಬಂದಿದ್ದರು. ಸುಮಲತಾ ಅವರನ್ನು ಪಕ್ಷಕ್ಕೆ ಅಹ್ವಾನ ಮಾಡಿದ್ದೀವಿ. ಇಲ್ಲ ಅಥವಾ ಸುಳ್ಳು ಅಂತ ಹೇಳಿಲ್ಲ. ತೀರ್ಮಾನ ಅವರಿಗೆ ಬಿಟ್ಟಿದ್ದು. ನಮ್ಮ ಪಕ್ಷ ಕೂಡ ಅವರ ಗೆಲುವಿಗೆ ಸಾಕಷ್ಟು ಶ್ರಮ ವಹಿಸಿದೆ. ಮಂಡ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಇಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಅವಕಾಶಗಳಿವೆ. ಒಳ್ಳೆಯ ತೀರ್ಮಾನ ಮಾಡುವಂತೆ ಸುಮಲತಾ ಅವರ ಬಳಿ ರಿಕ್ವೆಸ್ಟ್ ಮಾಡಿದ್ದೀನಿ. ಅವರು ಒಳ್ಳೆಯ ನಿರ್ಧಾರ ಮಾಡುತ್ತಾರೆಂಬ ವಿಶ್ವಾಸವಿದೆ ಎಂದರು.
ಮದ್ದೂರು ಕ್ಷೇತ್ರದಿಂದ ಅಭಿಷೇಕ್ ಅಂಬರೀಶ್ ಬಿಜೆಪಿಯಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸುಮಲತಾ ಅವರು ಇನ್ನು ಪಕ್ಷಕ್ಕೆ ಬಂದಿಲ್ಲ. ಕೂಸು ಹುಟ್ಟುವ ಮೊದಲೇ ಕುಲಾವಿ ಬೇಡ. ನಾವು ಸಮಾಜಮುಖಿಯಾಗಿ ಕೆಲಸ ಮಾಡುವಂತಹವರು. ಸಮಾಜಕ್ಕೆ ಅನುಕೂಲ ಆಗುವಂತಹ ಪ್ರಮುಖರನ್ನು ಹಾಗೂ ಮುಖಂಡರನ್ನು ಪಕ್ಷಕ್ಕೆ ಆಹ್ವಾನ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಮಂಡ್ಯದ ಐಆರ್ಎಸ್ ಅಧಿಕಾರಿ ಲಕ್ಷ್ಮೀ ಅವರು ಈ ಹಿಂದೆ ಜೆಡಿಎಸ್ನಲ್ಲಿ ಸಕ್ರೀಯವಾಗಿ ಇದ್ದರು. ಅವರನ್ನು ಕೂಡ ಆಹ್ವಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಾಗಿ ಬಿಜೆಪಿ ಸೇರಲಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿಯ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಮುಂದಿನ ತಿಂಗಳಿನಿಂದ ಪ್ರಕ್ರಿಯೆ ಆರಂಭವಾಗಲಿದೆ. ನಾನು ಆಪರೇಷನ್ ನಿಪುಣ ಅಲ್ಲ. ಆದರೆ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.