ರಾಮನಗರ: ಅಶ್ವತ್ಥನಾರಾಯಣ ರಾಜ್ಯದ ಅತ್ಯಂತ ಭ್ರಷ್ಟ ಮಿನಿಸ್ಟರ್. ಆದರೂ ತಾನು ಕ್ಲೀನ್ ಹ್ಯಾಂಡ್, ಪರಿಶುದ್ಧ ರಾಜಕಾರಣಿ ಎಂದು ಅವರು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಕನಕಪುರದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯ ಮೂರ್ನಾಲ್ಕು ಮಂದಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈಗ ಅವರೂ ಕೂಡಾ ವಿಚಾರಣೆ ಎದುರಿಸುತ್ತಿದ್ದಾರೆ.
ಅಂದಹಾಗೆ ಅಂಗಡಿ ತೆರೆದಾಗ ಗ್ರಾಹಕರು ಬರುವುದು ಸಹಜ. ಸರ್ಕಾರ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದ್ದರಿಂದಲೇ ನೌಕರಿ ಆಸೆಗೆ ಸಾಲ-ಸೋಲ ಮಾಡಿ ಕೆಲವರು ಹಣ ಕೊಟ್ಟಿದ್ದಾರೆ. ಮಾಡಿದ ತಪ್ಪಿಗಾಗಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಿದರು.
ಪಿಎಸ್ಐ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದ ವ್ಯಕ್ತಿಯೊಬ್ಬರಿಗೆ ಪೊಲೀಸರು ವಿಚಾರಣೆಗೆ ನೋಟಿಸ್ ನೀಡಿದ್ದರು. ಆದರೆ ಸಚಿವರ ಸಂಬಂಧಿ ಹೇಳಿದ ನಂತರ ವಿಚಾರಣೆ ಮಾಡದೇ ಕಳುಹಿಸಿದ್ದಾರೆ.
ಇದರ ಅರ್ಥ ಏನು? ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು. ಅಶ್ವತ್ಥನಾರಾಯಣ್ ಅವರು ಅದೇನೋ ಬಿಚ್ತೀನಿ ಅಂದ್ರಲ್ಲ, ಮೊದಲು ಅದನ್ನ ಬಿಚ್ಚಲಿ ಎಂದು ಸವಾಲು ಹಾಕಿದರು.