ರಾಮನಗರ : ಮೇಕೆದಾಟು ಪಾದಯಾತ್ರೆ ಕುರಿತು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕಠೋರವಾಗಿ ಪ್ರತಿಕ್ರಿಯಿಸಿದ್ದು, ಡಿಕೆಶಿ ಅವರನ್ನ ಬಂಧಿಸದಿದ್ದರೆ ‘ನಮ್ಮದು ದುರ್ಬಲ ಸರ್ಕಾರ’ ಎಂದೇ ಭಾವಿಸುವೆ ಎನ್ನುವ ಮೂಲಕ ಸರ್ಕಾರಕ್ಕೆ ಇರಿಸುಮುರಿಸು ಉಂಟು ಮಾಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿವೈ, ಮೇಕೆದಾಡು ಪಾದಯಾತ್ರೆ ಡಿಕೆಶಿಯ ನಾಟಕ ಮಂಡಳಿ. ಜನರಿಗೊಂದು ನ್ಯಾಯ? ಈ ಗುಂಡಾಗಳಿಗೊಂದು ನ್ಯಾಯವೇ? ಡಿಕೆಶಿಯನ್ನು ಸರ್ಕಾರ ಇಂದು ಬಂಧಿಸಬೇಕು. ಇಲ್ಲವಾದಲ್ಲಿ ನಮ್ಮ ಕಾರ್ಯಕರ್ತರೇ ಬೀದಿಗಿಳಿದು ಪಾದಯಾತ್ರೆ ನಿಲ್ಲಿಸುವ ಪ್ರಯತ್ನ ಮಾಡುತ್ತಾರೆ. ನಾಲ್ಕು ದಿನದಿಂದ ಡಿ.ಕೆ.ಶಿವಕುಮಾರ್ ಹಾಗೂ ಅವರ ಪಟಲಾಂ ಮಾಡುತ್ತಿರುವ ದಂಡಯಾತ್ರೆ ಬಗ್ಗೆ ಸರ್ಕಾರ ಸರಿಯಾಗಿ ನಡೆದುಕೊಂಡಿಲ್ಲ ಎಂದು ಹೈಕೋರ್ಟ್ ಹೇಳಿದೆ. ಆದರೂ, ಇದರ ಸೂಕ್ಷ್ಮತೆಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ಇಂದು ಡಿಕೆಶಿಯನ್ನು ಬಂಧಿಸದಿದ್ದರೆ ‘ನಮ್ಮದು ದುರ್ಬಲ ಸರ್ಕಾರ’ ಎಂದು ನಾನು ಒಪ್ಪಿಕೊಳ್ಳುವೆ ಎಂದರು.
ಡಿಕೆಶಿಯದ್ದು ಗಂಡಾಗುಂಡಿ ಮಾತು. ದಡಂ ದಶಗುಣಂ ಮೂಲಕವಾದರೂ ಪಾದಯಾತ್ರೆ ತಡೆಯಬೇಕು ಎಂದು ಒತ್ತಾಯಿಸಿದ ಯೋಗೇಶ್ವರ್, ಕೋವಿಡ್ನಿಂದ ಲಕ್ಷಾಂತರ ಮಂದಿ ಸತ್ತಿದ್ದಾರೆ. ಕರೊನಾ ಮೊಲದ ಅಲೆಯಲ್ಲಿ ಕಾಂಗ್ರೆಸ್ ಹಾಗೂ ಡಿಕೆಶಿಯೇ ಬಿಜೆಪಿ ಮೇಲೆ ಆರೋಪ ಮಾಡಿಕೊಂಡು ಓಡಾಡುತ್ತಿದ್ದರು. ಆದರೀಗ 3ನೇ ಅಲೆಯ ತೀವ್ರತೆ ನಡುವೆಯೂ ನೀರಾವರಿ ದೊಂಬರಾಟ ಮಾಡುತ್ತಿದ್ದಾರೆ. ಬಸ್ಗಳ ಮೂಲಕ ಮುಗ್ಧರನ್ನು ಕರೆತಂದು ಕೋವಿಡ್ ಅಂಟಿಸುತ್ತಿದ್ದಾರೆ. ನಾವು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಿದ್ದೇವೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇದು ನಮ್ಮ ಸರ್ಕಾರದ ದೌರ್ಬಲ್ಯ ಅಲ್ಲ, ಸಹನೆ. ನ್ಯಾಯಾಲಯ ಮಧ್ಯಪ್ರವೇಶಿಸುವ ಮೊದಲೇ ಸರ್ಕಾರ ಪಾದಯಾತ್ರೆಯನ್ನು ತಡೆಯಬೇಕಿತ್ತು. ಡಿಕೆಶಿಯಲ್ಲಿ ಕ್ರಿಮಿನಾಲಜಿ ಇದೆ. ಅವರಲ್ಲಿ ಪ್ರಮಾಣಿಕ ಹೋರಾಟತೆ ಇಲ್ಲ. ಹೀಗಾಗಿ ಅವರನ್ನು ಬಂಧಿಸಲು ಹೋದ ವೇಳೆ ಏನು ಬೇಕಾದರೂ ಮಾಡುತ್ತಾರೆ. ಆಸ್ಪತ್ರೆಗೆ ಸೇರಬಹುದು. ಪ್ರಜ್ಞೆ ತಪ್ಪುವ ನಾಟಕ ಮಾಡಬಹುದು ಎಂದು ಯೋಗೇಶ್ವರ್ ಟೀಕಿಸಿದರು. ಸಿದ್ದರಾಮಯ್ಯ ಅವರಿಗಿಂತ ತಾನು ರಾಜಕೀಯವಾಗಿ ಶಕ್ತಿಯುತವಾಗಬೇಕು ಎಂಬ ಉದ್ದೇಶದಿಂದ ಡಿಕೆಶಿ ಈ ಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.