ಬೆಂಗಳೂರು: ಪ್ರೀತಿಸಿ ಮದುವೆ ಆಗಿದ್ದ ದಂಪತಿ ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಎಚ್ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ನಡೆದಿದೆ.
ಭಟ್ಕಳಾ ಮೂಲದ ಗಿರಿಜಾ (30) ಕೊಲೆಯಾದ ಪತ್ನಿ. ನವೀನ್ ಕೊಲೆ ಮಾಡಿದ ಪತಿ.
ಗಿರಿಜಾ ಮತ್ತು ನವೀನ್ ಕಳೆದ ಎಂಟು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಇತ್ತೀಚೆಗೆ ಗರ್ಭಿಣಿಯಾಗಿದ್ದ ಗಿರಿಜಾಗೆ ಗರ್ಭಪಾತವಾಗಿತ್ತು. ಗರ್ಭಪಾತ ಆಗಿದ್ದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಿರಿಜಾ, ಸದ್ಯಕ್ಕೆ ಮಗು ಬೇಡ ಅಂದಿದ್ದಳು. ಆದರೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ- ಹೆಂಡತಿ ನಡುವೆ ಸದಾ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಕಳೆದ ಏಪ್ರಿಲ್ 12ರಂದು ಮಗು ಮಾಡಿಕೊಳ್ಳುವ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಸಿಟ್ಟಿನಲ್ಲಿ ಪತ್ನಿ ಗಿರಿಜಾ ಮಲಗಿರುವಾಗ ನವೀನ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಗಿರಿಜಾ ಬೆಂಗಳೂರಿನ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ನವೀನ್ನ ಪರಿಚಯವಾಗಿದ್ದಳು. ಇವರಿಬ್ಬರ ಪ್ರೀತಿಗೆ ಗಿರಿಜಾ ಪೋಷಕರು ಪ್ರಾರಂಭದಲ್ಲಿ ವಿರೋಧ ತೋರಿದ್ದರು. ಆದರೆ ಕೊನೆಗೆ ಇವರ ಮದುವೆಗೆ ಒಪ್ಪಿಕೊಂಡಿದ್ದರು.
ಈ ಮಧ್ಯೆ ಮಗು ವಿಚಾರಕ್ಕೆ ಇಬ್ಬರು ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕೋಪದ ಕೈಗೆ ಬುದ್ಧಿಕೊಟ್ಟ ನವೀನ್ ಗಿರಿಜಾಳ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು, ಆರೋಪಿ ನವೀನ್ನನ್ನು ಬಂಧಿಸಿದ್ದಾರೆ.