ಬೆಂಗಳೂರು: ತಲೆಗೆ ಗಾಯವಾಗಿದ್ದ ಮಗುವಿಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಚಿಕಿತ್ಸೆ ನಿರಾಕರಿಸಿದ ಘಟನೆ ನಡೆದಿದ್ದು, ಆಸ್ಪತ್ರೆ ಆಡಳಿತ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ.
ಚಿಕ್ಕಮಗಳೂರಿನ ಬಸವನಗುಡಿ ನಿವಾಸಿಗಳಾದ ವೆಂಕಟೇಶ್ ಮತ್ತು ಜ್ಯೋತಿ ದಂಪತಿಯ ಮೃತ ಮಗುವಿಗೆ ತಲೆಗೆ ಪೆಟ್ಟಾಗಿದ್ದು, ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು. ಅದರಂತೆ ಹಾಸನದಿಂದ ಬೆಂಗಳೂರಿನವರೆಗೆ 224 ಕಿಮೀ ‘ಗ್ರೀನ್ ಕಾರಿಡಾರ್’ ವ್ಯವಸ್ಥೆ ಮಾಡಲಾಗಿತ್ತು. ಆಂಬ್ಯುಲೆನ್ಸ್ ಚಾಲಕ ಹಾಸನದಿಂದ ಬೆಂಗಳೂರಿಗೆ 224 ಕಿಮೀ ದೂರವನ್ನು 1 ಗಂಟೆ 40 ನಿಮಿಷಗಳಲ್ಲಿ ಕ್ರಮಿಸಿ ನಿಮ್ಹಾನ್ಸ್ ತಲುಪಿದ್ದರು. ಅಲ್ಲದೆ ಹಾಸನದ ವೈದ್ಯರು ನಿಮ್ಹಾನ್ಸ್ನ ಆಡಳಿತ ಘಟಕಕ್ಕೆ ಕರೆ ಮಾಡಿ ಮಗುವಿನ ತುರ್ತು ಚಿಕಿತ್ಸಾ ಅಗತ್ಯಗಳ ಬಗ್ಗೆ ತಿಳಿಸಿದ್ದರು. ಆದರೆ, ನಿಮ್ಹಾನ್ಸ್ ಅಧಿಕಾರಿಗಳು ಬೆಡ್ ಇಲ್ಲ ಎಂದು ಪೋಷಕರಿಗೆ ತಿಳಿಸಿದ್ದಾರೆ. ಹಾಸಿಗೆ ಕೊಡಿಸಿ ಚಿಕಿತ್ಸೆ ಆರಂಭಿಸುವಂತೆ ಪೋಷಕರು ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಪೋಷಕರು ಆರೋಪಿಸಿದ್ದು, ಕೊನೆಗೆ ಮಗು ಆಸ್ಪತ್ರೆ ಆವರಣದಲ್ಲಿಯೇ ಸಾವನ್ನಪ್ಪಿದೆ.
ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕನ ಸಾವಿಗೆ ಕಾರಣವಾದ ತುರ್ತು ಪರಿಸ್ಥಿತಿಯ ಬಗ್ಗೆ ನಿಮ್ಹಾನ್ಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ನಿಮ್ಹಾನ್ಸ್ನಲ್ಲಿ ದಟ್ಟಣೆ ಹೆಚ್ಚಿದೆ. ವೈದ್ಯರು ಒತ್ತಡದ ನಡುವೆಯೂ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ. ನಾನು ಮಗುವಿನ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತೇನೆ” ಎಂದು ಹೇಳಿದ್ದಾರೆ.