ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸಿ.ಟಿ ರವಿ ಅವರಿಗೆ ತೀವ್ರ ನಿರಾಶೆಯಾದಂತೆ ಕಾಣುತ್ತಿದೆ. ಅವರ ಮಾತುಗಳಲ್ಲಿಯೇ ಈ ವಿಚಾರ ವ್ಯಕ್ತವಾಗುತ್ತಿದೆ.
ಪ್ರತಿದಿನ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಆಯ್ಕೆಗೆ ಪ್ರತಿಕ್ರಿಯಿಸಿದ ಸಿ.ಟಿ ರವಿ ನನ್ನ ಮಾತೇ ನನಗೆ ತಿರುಗುಬಾಣವಾಗಬಹುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣ ವಿಚಾರಕ್ಕೆ ಸಂಬಂಧಪಟ್ಟಂತೆ ನೀವು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಮುಂದೆ ಚರ್ಚೆ ಪಕ್ಷದ ಒಳಗಿನ ವೇದಿಕೆಯಲ್ಲಿ, ಪ್ರಶ್ನೆ ಮಾಡಬಹುದು. ಈಗ ಮಾತನಾಡುವುದಿಲ್ಲ. ನಾನು ಮಾತನಾಡಿದರೆ ಅದು ಬಿಸಿಬಿಸಿ ಸುದ್ದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
“ನಿಮ್ಮಂತೆ ಕೆಲ ಪ್ರಶ್ನೆಗಳು ನನ್ನನ್ನೂ ಕಾಡುತ್ತಿವೆ. ಈಗ ಉತ್ತರಿಸಿದರೆ ಅಪಾರ್ಥವಾಗುತ್ತದೆ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕೆಂಬ ನಿಟ್ಟಿನಲ್ಲಿ ನಾನೂ ಕೆಲಸ ಮಾಡುತ್ತೇನೆ’ ಎಂದು ಮಾಜಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮಕ ಮೆರಿಟ್ ಆಧಾರದ ಮೇಲೆ ಆಗಿದೆಯೋ ಜಾತಿ ಆಧಾರದಲ್ಲಿ ಆಗಿದೆಯೋ ಎಂಬ ಪ್ರಶ್ನೆಗೆ, ನಾನು ಇದಕ್ಕೆ ಉತ್ತರಿಸಲು ಸಾಧ್ಯವಿಲ್ಲ. ನೀವು ನನ್ನನ್ನು ಸಿಲುಕಿಸಿ ಹಾಕಲು ಪ್ರಯತ್ನಿಸಬೇಡಿ. ನನ್ನ ಮಾತೇ ನನಗೆ ತಿರುಗುಬಾಣವಾಗಬಹುದು ಎಂದರು. ವಿಪಕ್ಷ ನಾಯಕ ಸ್ಥಾನವನ್ನು ಸಮರ್ಥರಾದವರಿಗೆ ನೀಡಬೇಕು. ಜಾತಿಗೆ ಸೀಮಿತವಾಗಿ ನೋಡಬಾರದು ಎಂದು ಹೇಳಿದರು.