ಬೆಂಗಳೂರು: ತುಂಡಾಗಿ ನೆಲಕ್ಕೆ ಬಿದ್ದಿದ್ದ ಕರೆಂಟ್ ವೈರ್ ತುಳಿದು ತಾಯಿ ಹಾಗೂ 9 ತಿಂಗಳ ಮಗಳು ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದ ವೈಟ್ಫೀಲ್ಡ್ನ ಕಾಡುಗೋಡಿಯಲ್ಲಿ ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಡೆದಿದೆ. ಬೆಸ್ಕಾಂ ನಿರ್ಲಕ್ಷ್ಯತನದಿಂದ ತಾಯಿ, ಮಗಳು ಬಲಿಯಾಗಿದ್ದಾರೆ.
ತಮಿಳುನಾಡು ಮೂಲದ ಸೌಂದರ್ಯ (23), ಮಗಳು ಸುವಿಕ್ಸ ಲಿಯಾ (9 ತಿಂಗಳು) ಮೃತ ದುರ್ದೈವಿಗಳು. ತಾಯಿ ಸೌಂದರ್ಯ ತನ್ನ ಮಗಳನ್ನು ಕರೆದುಕೊಂಡು ತಮಿಳುನಾಡಿನಿಂದ ಬೆಂಗಳೂರಿಗೆ ಆಗಮಿಸಿದ್ದರು. ನಗರದಲ್ಲಿನ ತಮ್ಮ ನಿವಾಸಕ್ಕೆ ಹೋಗುತ್ತಿದ್ದ ವೇಳೆ ಕಾಡುಗೋಡಿಯಲ್ಲಿನ ರಸ್ತೆಯೊಂದರ ಬದಿ ಕರೆಂಟ್ ವೈರ್ ಕಟ್ ಆಗಿ ನೆಲಕ್ಕೆ ಬಿದ್ದಿತ್ತು.
ಬೆಳಗಿನ ಜಾವ ಆಗಿದ್ದರಿಂದ ನಸುಕಿನಲ್ಲಿ ಗಮನಿಸದೇ ಕರೆಂಟ್ ವೈರ್ ತುಳಿದಿದ್ದಾರೆ. ಪರಿಣಾಮ ತಾಯಿ, ಮಗಳು ಇಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಎಇ ಚೇತನ್, ಜೆಇ ರಾಜಣ್ಣ, ಬೆಸ್ಕಾಂ ಸ್ಟೇಷನ್ ಆಪರೇಟರ್ ಮಂಜು ಸೇರಿ ಮೂವರು ಬೆಸ್ಕಾಂ ಅಧಿಕಾರಿಗಳನ್ನು ವಶಕ್ಕೆ ಪಡೆದು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.