ಧಾರವಾಡ-ಬೆಂಗಳೂರು ನಡುವಿನ ವಂದೇ ಭಾರತ್ ರೈಲಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಮೈಸೂರು-ಚೆನ್ನೈ ಬಳಿಕ ಇದು ರಾಜ್ಯದಲ್ಲಿ ಎರಡನೇ ವಂದೇ ಭಾರತ್ ರೈಲು ಸೇವೆಯಾಗಿದ್ದು, ನಾಳೆಯಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ಬೆಂಗಳೂರಿನಿಂದ ಧಾರವಾಡಕ್ಕೆ 1,165 ರೂಪಾಯಿ ನಿಗದಿ ಮಾಡಲಾಗಿದೆ.
ಈ ಮಧ್ಯೆ ಈ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೂ ಓಡಿಸಬೇಕು ಎಂದು ಕರವೇ ಆಗ್ರಹಿಸಿದೆ. ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಪತ್ರ ಸಲ್ಲಿಸಿದೆ. ಅಂದ ಹಾಗೇ, ಇಂದು ಒಂದೇ ದಿನ ಕರ್ನಾಟಕದ್ದು ಸೇರಿ ಐದು ಹೊಸ ವಂದೇ ಭಾರತ್ ರೈಲುಗಳು ಹಳಿಯೇರಲಿದೆ.ಇದರೊಂದಿಗೆ ವಂದೇ ಭಾರತ್ ರೈಲುಗಳ ಸಂಖ್ಯೆ 24ಕ್ಕೇರಲಿದೆ.
ಉಳಿದ 4 ರೈಲುಗಳೆಂದರೆ ಭೋಪಾಲ್- ಇಂದೋರ್, ಭೋಪಾಲ್-ಜಬಲ್ಪುರ, ರಾಂಚಿ-ಪಟನಾ, ಮತ್ತು ಗೋವಾ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್. ಈ ಪೈಕಿ ಗೋವಾ ಮೊದಲ ಬಾರಿಗೆ ವಂದೇ ಭಾರತ್ ರೈಲು ಸೇವೆ ಪಡೆಯುತ್ತಿದೆ.
ವಂದೇಭಾರತ್ ಎಕ್ಸ್ಪ್ರೆಸ್ ರೈಲುಗಳು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಅತ್ಯುತ್ತಮ ಸೀಟುಗಳು, ಗುಣಮಟ್ಟದ ಆಹಾರ, ಶುಚಿತ್ವಕ್ಕೆ ಆದ್ಯತೆ, ಲಗೇಜ್ ಇಡಲು ಅನುಕೂಲಕರ ಸ್ಥಳ ಸೇರಿದಂತೆ ಗುಣಮಟ್ಟದ ಸೇವೆ ನೀಡುತ್ತದೆ. ಆದರೆ ಇತರೆ ರೈಲುಗಳಿಗೆ ಹೋಲಿಸಿದರೆ ಇವುಗಳ ಟಿಕೆಟ್ ದರ ಸಾಕಷ್ಟು ದುಬಾರಿ ಇದೆ.