ಬೆಂಗಳೂರು: ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂಬತ್ತು ಪುಟಗಳ ಪತ್ರವನ್ನು ಕಿರುಕುಳಕ್ಕೆ ಒಳಗಾದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಪೊಲೀಸರು ಬರೆದಿದ್ದಾರೆ ಎಂದು ಹೇಳಲಾಗಿದೆ. ಪ್ರಭಾರಿ ಪೊಲೀಸ್ ನಿರೀಕ್ಷಕ ಶರಣಗೌಡ ಅವರು ಕೆಳಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಣ ನೀಡುವಂತೆ ಪೀಡಿಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ರಜೆಗಾಗಿ ಕೆಳಹಂತದ ಪೊಲೀಸ್ ಸಿಬ್ಬಂದಿ ಪೊಲೀಸ್ ಇನ್ಸ್ಪೆಕ್ಟರ್ರನ್ನು ಸಂಪರ್ಕಿಸಿದಾಗಲೆಲ್ಲಾ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದು, ಹಣ ನೀಡಿದರೆ ಮಾತ್ರ ರಜೆ ಪಡೆಯಲು ಸಾಧ್ಯ ಎಂಬ ಷರತ್ತು ವಿಧಿಸುತ್ತಾರೆ ಎಂದು ಆರೋಪಿಸಲಾಗಿದೆ. ಬೀಟ್ ಪೊಲೀಸರಿಗೆ ದ್ವಿಚಕ್ರ ವಾಹನ ಮಂಜೂರು ಮಾಡಲು ರೂ 5,000 ಲಂಚವನ್ನು ನೀಡಬೇಕಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ತನ್ನ ಹೆಂಡತಿಯನ್ನು ಠಾಣೆಗೆ ಕರೆತಂದು ಚೇಂಬರ್ನಲ್ಲಿ ಅವರೊಂದಿಗೆ ಮಾತನಾಡುತ್ತಾ ಕುಳಿತಿರುತ್ತಾರೆ. ಈಜುಕೊಳಕ್ಕೆ ತನ್ನ ಮಕ್ಕಳನ್ನು ಕರೆದೊಯ್ಯುವ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ತನ್ನ ಮಕ್ಕಳನ್ನು ಇಲಾಖೆಯ ವಾಹನ ಬಳಸುತ್ತಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಋತುಚಕ್ರದ ಸಮಯದಲ್ಲಿ ರಜೆಗಾಗಿ ಮಹಿಳಾ ಸಿಬ್ಬಂದಿ ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸಿದರೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆ ಕೇಳುತ್ತಾರೆ. ಇನ್ಸ್ಪೆಕ್ಟರ್ ತನ್ನ ಪೋಸ್ಟಿಂಗ್ಗಾಗಿ 25 ಲಕ್ಷ ರೂ. ಖರ್ಚು ಮಾಡಿರುವುದಾಗಿ ಸಿಬ್ಬಂದಿಗೆ ತಿಳಿಸಿದ್ದು, ಇಲಾಖೆ ಸಿಬ್ಬಂದಿಯ ತಾಪತ್ರಯ ಕೇಳಲು ನಾನು ಇಲ್ಲಿಗೆ ಬಂದಿಲ್ಲ ಎಂದು ಕೂಗಾಡುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದ್ವಿಚಕ್ರ ವಾಹನಕ್ಕೆ 15 ಸಾವಿರ, ಲ್ಯಾಪ್ಟಾಪ್ ಕಳ್ಳತನಕ್ಕೆ 5 ಸಾವಿರ: ಪೊಲೀಸ್ ಠಾಣೆಯ ಓರ್ವ ಸಿಬ್ಬಂದಿ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡ ವೈರಲ್ ಆದ ಪತ್ರದಲ್ಲಿದೆ. ಪತ್ರದಲ್ಲಿ ವಿವಿಧ ಬಾರ್ಗಳು, ಮಾಲ್ಗಳು ಮತ್ತು ಪಬ್ಗಳಿಗೆ ನಿಗದಿತ ಲಂಚದ ಮೊತ್ತದ ವಿವರಗಳನ್ನು ವಿವರಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನಕ್ಕೆ ಎಫ್ಐಆರ್ ದಾಖಲಿಸಲು 15 ಸಾವಿರ ಹಾಗೂ ಲ್ಯಾಪ್ಟಾಪ್ ಕಳ್ಳತನಕ್ಕೆ 5 ಸಾವಿರ ರೂಪಾಯಿ ವಸೂಲಿ ನಿಗದಿಗೊಳಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಸುಳ್ಳು ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾದ ಯುವಕನ ಆತ್ಮಹತ್ಯೆ ಪ್ರಕರಣದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ತಮ್ಮನ್ನು ಸಾಮೂಹಿಕವಾಗಿ ಬೇರೆ ಠಾಣೆಗೆ ಸಾಮೂಹಿಕವಾಗಿ ವರ್ಗಾವಣೆ ಮಾಡುವಂತೆ ಸಂತ್ರಸ್ತ ಪೊಲೀಸ್ ಸಿಬ್ಬಂದಿ ರಾಷ್ಟ್ರಪತಿಗೆ ಮನವಿ ಮಾಡಿದ್ದಾರೆ.