ಕೋಲಾರ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಮೂಲಗಳ ಪ್ರಕಾರ ಬಾದಾಮಿ, ವರುಣಾ, ಚಾಮುಂಡೇಶ್ವರಿ, ಚಾಮರಾಜಪೇಟೆ, ಕೋಲಾರ ಮತ್ತು ಹೆಬ್ಬಾಳ ಕ್ಷೇತ್ರಗಳ ಹೆಸರು ಪರಿಶೀಲನೆಯಲ್ಲಿದೆ ಆದರೆ ಅವರು ಅಂತಿಮವಾಗಿ ಕೋಲಾರದಿಂದ ಸ್ಪರ್ಧಿಸಲು ಒಪ್ಪಿಕೊಂಡರು.
ಕಳೆದ ಆರು ತಿಂಗಳಿನಿಂದ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಹೇರುತ್ತಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ನಜೀರ್ ಅಹಮದ್ ಸಿದ್ದು ಮನವೊಲಿಸುವಲ್ಲಿ ಯಶಸ್ವಿಯಾದರು. ಸೀತಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಮೂಲಕ ಶೀಘ್ರವೇ ಚುನಾವಣಾ ಪ್ರಚಾರ ಆರಂಭಿಸಲು ನಿರ್ಧರಿಸಲಾಗಿದೆ. ಇದೇ ಸಂದರ್ಭದಲ್ಲಿ ಕೋಲಾರದಲ್ಲಿ ಬೃಹತ್ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿದೆ.
ಒಕ್ಕಲಿಗ ಹಾಗೂ ಮುಸ್ಲಿಂ ಮತದಾರರ ಪ್ರಾಬಲ್ಯವಿರುವ ಕೋಲಾರದಲ್ಲಿ ಹಿಂದುಳಿದ ಹಾಗೂ ಪರಿಶಿಷ್ಟ ಜಾತಿಯ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸಿದರೆ ಮುಸ್ಲಿಂ ಮತ ಕ್ರೋಡೀಕರಿಸಬಹುದು. ಕುರುಬ ಮತ್ತು ಹಿಂದುಳಿದ ವರ್ಗದ ಮತಗಳೂ ಇರುತ್ತವೆ. ಅಹಿಂದ ವೋಟ್ ಬ್ಯಾಂಕ್ ಮತ್ತೊಮ್ಮೆ ಕಾಂಗ್ರೆಸ್ ಗೆ ಮರಳಿ ಬರಲಿದೆ ಎಂಬ ಲೆಕ್ಕಾಚಾರವೂ ಇದೆ.