ಬೆಂಗಳೂರು: ಪೂರ್ವ ದ್ವಾರದಿಂದ ವಿಧಾನಸೌಧ ಪ್ರವೇಶಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ನಲ್ಲಿ ಚಾಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪೊಲೀಸರು ಮೊದಲಿಗೆ ಮಹಿಳೆಯ ಕೈಯಿಂದ ಚಾಕು ವಶಕ್ಕೆ ಪಡೆದು ಆಕೆಗೆ ವಿಧಾನಸಭೆಯೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದ್ದರು. ಬಳಿಕ ಪ್ರಕರಣದ ಗಂಭೀರತೆ ಅರಿತು ಆಕೆಯನ್ನು ಕಟ್ಟಡದಿಂದ ಹೊರಗೆ ಕಳುಹಿಸಲಾಯಿತು.
ಮಹಿಳೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವಾರ ಬಜೆಟ್ ಮಂಡನೆ ವೇಳೆ ರಾಜ್ಯ ವಿಧಾನಸಭೆಯಲ್ಲಿ ಅನಾಮಿಕ ವ್ಯಕ್ತಿಯೊಬ್ಬ ವಿಧಾನಸೌಧ ಪ್ರವೇಶಿಸಿ ನಾನು ಮೊಣಕಾಲ್ಮೂರು ಶಾಸಕ ಎಂದು ಹೇಳಿಕೊಂಡು ಶಾಸಕರು ಕುಳಿತುಕೊಳ್ಳುವ ಕುರ್ಚಿಯಲ್ಲಿ ಕುಳಿತಿದ್ದ. ಅಲ್ಲದೆ ಡೆಪ್ಯುಟಿ ಸಿಎಂಗೆ ಹಸ್ತಲಾಘವ ಮಾಡಿದ್ದ. ಈ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದನ್ನು ಗಮನಿಸಬಹುದು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಭದ್ರತಾ ಲೋಪದ ಬಗ್ಗೆ ಪೊಲೀಸರಿಂದ ವರದಿ ಕೇಳಿದ್ದರು.