ಬೆಂಗಳೂರು: ಕಂಬಳದ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ, ರಾಜ ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಜೋಡುಕೆರೆ ಕಂಬಳ ನಡೆಯಲಿದ್ದು, ತುಳುನಾಡಿನ ಕಂಬಳದ ಕೋಣಗಳು ಬೆಂಗಳೂರಿನ ಕಡೆಗೆ ರೈಲು ಏರಲಿವೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆಯಲಿರುವ ಈ ಕಂಬಳಕ್ಕೆ ಮೈಸೂರು ಅರಸರಿಂದ ಅನುಮತಿ ದೊರೆತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜನಪ್ರಿಯವಾಗಿರುವ ಈ ಕಂಬಳ ರೈತಾಪಿ ವರ್ಗದವರು ಭತ್ತದ ಕೊಯಿಲಿನ ನಂತರ ಮನೋರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಕ್ರೀಡೆ. ಕಾರ್ತಿಕ ಮಾಸದ ದೀಪಾವಳಿ ಹಬ್ಬದ ನಂತರ ಚಳಿಗಾಲದಲ್ಲಿ ಆರಂಭವಾಗುವ ಈ ಜಾನಪದ ಕ್ರೀಡೆಯನ್ನು, ಮಾರ್ಚ್ ತಿಂಗಳವರೆಗೂ ಅವಳಿ ಜಿಲ್ಲೆಯ ವಿವಿಧ ಭಾಗದಲ್ಲಿ ಆಯೋಜಿಸಲಾಗುತ್ತದೆ.
ಕೋಣಗಳನ್ನು ವೇಗವಾಗಿ ಓಡಿಸುವ ಉದ್ದೇಶದಿಂದ ನಾಗರ ಬೆತ್ತಗಳಿಂದ ಅವುಗಳಿಗೆ ಹೊಡೆಯುವುದು ಸಾಮಾನ್ಯ. ಈ ಕಾರಣಕ್ಕಾಗಿ ಕಂಬಳವನ್ನು ಪ್ರಾಣಿ ಹಿಂಸೆ ಎಂದು ಅನೇಕರು ದೂಷಿಸುತ್ತಾರೆ ಹಾಗೂ ಈ ಕ್ರೀಡೆಯನ್ನು ನಿಷೇಧಿಸಬೇಕೆನ್ನುವ ಕೂಗು ಕೇಳಿ ಬಂದದ್ದೂ ಇದೆ. ಆದರೆ ಏಟು ಹೊಡೆದರೂ ಸ್ಪರ್ಧೆಯ ಕೊನೆಗೊಂಡ ನಂತರ ಅವುಗಳನ್ನು ಚೆನ್ನಾಗಿ ಆರೈಕೆ ಮಾಡಲಾಗುತ್ತದೆ ಎಂಬ ಯಜಮಾನರುಗಳ ಹೇಳಿಕೆಯು ಕಂಬಳವು ಇನ್ನು ಚಾಲ್ತಿಯಲ್ಲಿರುವುದಕ್ಕೆ ಕಾರಣವಾಗಿದೆ.