ಬೆಂಗಳೂರು: ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಕೌಂಟ್ ಡೌನ್ ಆರಂಭವಾಗಿದೆ. ಈಗಾಗಲೇ ಕಡಲೆಕಾಯಿ ಪರಿಷೆ ರಂಗೇರಿದ್ದು ದೊಡ್ಡ ಗಣೇಶ ದೇವಸ್ಥಾನದ ಸುತ್ತ-ಮುತ್ತ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಎರಡು ದಿನಗಳಿಂದ ತರಹೇವಾರಿ ಕಡಲೆಕಾಯಿಗಳಿಂದ ತುಂಬಿ ತುಳುಕುತ್ತಿರುವ ಬೆಂಗಳೂರಿನ ಬೀದಿ ಬದಿಗಳಲ್ಲಿ ಕಡಲೆಕಾಯಿ ಮಾರಾಟ ಮಾಡಲಾಗುತ್ತಿದೆ. ಆದರೆ ಕಡಲೆಕಾಯಿ ಪರಿಷೆಗೆ ನಾಳೆ ಅಧಿಕೃತ ಚಾಲನೆ ಸಿಗಲಿದ್ದು ನಾಳೆಯಿಂದ ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ.
ನಾಳೆಯಿಂದ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗುವ ಹಿನ್ನೆಲೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಯವರು ದೊಡ್ಡ ಗಣೇಶನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಕಡಲೆಕಾಯಿ ಪರಿಷೆಯ ಸಿದ್ದತೆಗಳನ್ನ ಪರಿಶೀಲಿಸಿದರು. ಸಚಿವರ ಜೊತೆಗೆ ಸ್ಥಳೀಯ ಶಾಸಕ ರವಿ ಸುಬ್ರಮಣ್ಯ, ಮುಜರಾಯಿ ಇಲಾಖೆಯ ಆಯುಕ್ತರು ಭಾಗಿಯಾಗಿದ್ದರು.
ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಕಡಲೆಕಾಯಿ ಪರಿಷೆಗೆ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಪರಿಷೆ ಉದ್ಘಾಟಿಸಲಿದ್ದಾರೆ. ಸುಮಾರು 200 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ.