ಬೆಂಗಳೂರು: ವಿಶ್ವ ಆರೋಗ್ಯ ಸಂಸ್ಥೆ 2023ನೇ ಸಾಲನ್ನು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿದ್ದು, ಇದರ ಅಂಗವಾಗಿ ಕೃಷಿ ಇಲಾಖೆ ಸಿರಿಧಾನ್ಯಗಳ ಪ್ರೋತ್ಸಾಹದಾಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಗಸ್ಟ್ 28 ರಂದು ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷದ ಅಂಗವಾಗಿ ಮಂಡ್ಯದಲ್ಲಿ ಸಿರಿಧಾನ್ಯ ಮೇಳ, ವಸ್ತು ಪ್ರದರ್ಶನ ಮತ್ತು ಬೆಲ್ಲದ ಪರಿಷೆ ಹಾಗೂ ಆಹಾರಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಿರಿಧಾನ್ಯ ಮೇಳ ಅಂಗವಾಗಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆ. 26 ರಂದು ಬೆಳಿಗ್ಗೆ 7 ಗಂಟೆಗೆ ಇಲಾಖಾ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸಿರಿಧಾನ್ಯಗಳ ನಡಿಗೆ (ವಾಕಥಾನ್) ಏರ್ಪಡಿಸಲಾಗಿದೆ. ಮಂಡ್ಯ ತಾಲ್ಲೂಕಿನ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.
ನಾಗಮಂಗಲ ತಾಲ್ಲೂಕಿನಲ್ಲಿ ಸಹ ಏಕಕಾಲದಲ್ಲಿ ಸಿರಿಧಾನ್ಯಗಳ ನಡಿಗೆ ಆಯೋಜಿಸಲಾಗಿದೆ. ಉಪ ವಿಭಾಗಾಧಿಕಾರಿಗಳು ಇದಕ್ಕೆ ಚಾಲನೆ ನೀಡಲಿದ್ದಾರೆ. ಸಿರಿಧಾನ್ಯವನ್ನು ಉತ್ತೇಜಿಸುವ ಸಲುವಾಗಿ ಸಿರಿಧಾನ್ಯಗಳ ರಂಗೋಲಿ ಸ್ಪರ್ಧೆ, ಮಂಡ್ಯ ಬೆಲ್ಲದ ಕುರಿತು ಪ್ರಬಂಧ ಸ್ಪರ್ಧೆ, ಸಿರಿಧಾನ್ಯಗಳ ಪಾಕ ಸ್ಪರ್ಧೆ, ಕೃಷಿ ಸಂಸ್ಕರಣೆ ಕುರಿತು ಛಾಯ ಚಿತ್ರ ಸ್ಪರ್ಧೆ ಏರ್ಪಡಿಸಲಾಗಿದೆ.
ಪ್ರಗತಿಪರ ರೈತರು, ರೈತ ಉತ್ಪಾದಕ ಸಂಸ್ಥೆಗಳು, ಕಿರು ಉದ್ದಿಮೆದಾರರು ಮತ್ತು ಸ್ವಸಹಾಯ ಸಂಘಗಳಿಗೆ ಕಿರು ಆಹಾರ ಉದ್ದಿಮೆ ಸ್ಥಾಪನೆಗೆ ಉತ್ತೇಜಿಸಲು ಸಿರಿಧಾನ್ಯ ಹಾಗೂ ಇತರೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಕುರಿತು ರಾಜ್ಯದ ಪ್ರತಿಷ್ಠಿತ ಆಹಾರ ಸಂಶೋಧನಾ ಸಂಸ್ಥೆಗಳಾದ ಸಿ.ಎಫ್.ಟಿ.ಆರ್.ಐ, ಮೈಸೂರು, ಎನ್.ಐ.ಎಫ್.ಟಿ.ಇ.ಎಂ ತಂಜಾವೂರು ಮತ್ತು ಐಐಎಂಆರ್ ಹೈದರಾಬಾದ್ ಸಂಸ್ಥೆಗಳ ವಿಜ್ಞಾನಿಗಳಿಂದ ತಾಂತ್ರಿಕ ಮಾಹಿತಿ ಒಳಗೊಂಡ ಸಂವಾದವನ್ನು ಏರ್ಪಡಿಸಲಾಗಿದೆ.
ಈ ಮೇಳದಲ್ಲಿ ಮುಖ್ಯವಾಗಿ ರೈತರಿಗೆ ಸಹಾಯವಾಗುವಂತೆ ಕೆಫೆಕ್ ಸಂಸ್ಥೆ ವತಿಯಿಂದ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಸ್ಥಾಪನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರಕುವ ಆರ್ಥಿಕ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಬ್ಯಾಂಕ್ಗಳಿಂದ ಆರ್ಥಿಕ ನೆರವು ಕುರಿತು ಸಲಹೆ ಒದಗಿಸಲಾಗುತ್ತದೆ.
ಪ್ರಪ್ರಥಮ ಬಾರಿಗೆ ಮಂಡ್ಯ ಬೆಲ್ಲದ ಪರಿಷೆ ಏರ್ಪಡಿಸಲಾಗಿದೆ ಜೊತೆಗೆ ಆಹಾರ ಮೇಳ ನಡೆಯಲಿದೆ. ಉತ್ಪಾದನೆಯಿಂದ ಉದ್ಯಮದೆಡೆಗೆ ಶೀರ್ಷಿಕೆಯಡಿ ಉತ್ಪಾದಕರು-ಖರೀದಿದಾರರ ಸಂಪರ್ಕ ಕಲಿಸುವುದು ಮುಖ್ಯ ಉದ್ದೇಶವಾಗಿದೆ.
ಪಿ.ಎಂ.ಎಫ್.ಎ.ಇ ಯೋಜನೆ ಫಲಾನುಭವಿಗಳು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಘಗಳು (ಎನ್.ಆರ್.ಎಲ್.ಎಂ) ಸಿರಿಧಾನ್ಯ ಸಂಸ್ಕರಣಾ ಸಂಸ್ಥೆಗಳು, ಸಂಸ್ಕರಣಾ ಘಟಕಗಳ ಉತ್ಪಾದಕ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಸಂಬAಧಿತ ಇಲಾಖೆಗಳು ಸಿರಿಧಾನ್ಯ ವಸ್ತುಪ್ರದರ್ಶನದಲ್ಲಿ ಭಾಗವಹಿಸಲಿವೆ ಎಂದರು.