ಆನೇಕಲ್: ಸೆಕ್ಯೂರಿಟಿ ಗಾರ್ಡ್ನಿಂದಲೇ ಮನೆ ದರೋಡೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದ ರಾಮರೆಡ್ಡಿ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಮಧುಸೂದನ್ ರೆಡ್ಡಿ ಎಂಬುವವರ ಮನೆಯಲ್ಲಿ 30 ಲಕ್ಷ ರೂ. ನಗದು, 250 ಗ್ರಾಂ ಚಿನ್ನ ದೋಚಿ ರೋಶನ್ ಎಂಬಾತ ಎಸ್ಕೇಪ್ ಆಗಿದ್ದಾನೆ. ಮಧುಸೂದನ್ ರೆಡ್ಡಿ ಒಂಟಿಯಾಗಿದ್ದನ್ನು ತಿಳಿದ ಮನೆಯ ಸೆಕ್ಯೂರಿಟಿ ಗಾರ್ಡ್ ರೋಶನ್, ರಾತ್ರಿ ತನ್ನ ನಾಲ್ವರು ಸ್ನೇಹಿತರನ್ನು ಕರೆಸಿಕೊಂಡಿದ್ದನು. ಮೊದಲ ಮಹಡಿಯ ಹಿಂಬಾಗಿಲು ಮುರಿದು ಒಳನುಗ್ಗಿದ್ದಾರೆ. ನಂತರ ಒಂಟಿಯಾಗಿದ್ದ ಮಧುಸೂದನ್ ರೆಡ್ಡಿ ಅವರ ಕೈ-ಕಾಲು ಕಟ್ಟಿ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ಮೂರು ತಿಂಗಳಿಂದ ಪತ್ನಿ ಜತೆ ರೋಶನ್ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದನು. ಕಳೆದ ಎರಡು ದಿನಗಳ ಹಿಂದೆ ಸಂಪ್ ಕ್ಲೀನ್ ಮಾಡಲು ಓರ್ವ ಆರೋಪಿ ಬಂದಿದ್ದು, ತಡರಾತ್ರಿ ಸೆಕ್ಯೂರಿಟಿ ಗಾರ್ಡ್ ವಾಸವಿದ್ದ ಕೊಠಡಿಯಲ್ಲಿ ಎಣ್ಣೆ ಪಾರ್ಟಿ ಮಾಡಿ, ಬಳಿಕ ಮನೆ ದೋಚಿ ರೋಶನ್ ಮತ್ತು ಆತನ ಗ್ಯಾಂಗ್ ಪರಾರಿಯಾಗಿದ್ದಾರೆ. ಪ್ರಕರಣ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.