ಬೆಂಗಳೂರು: ಮಂಡ್ಯದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಂದು ಸಂಸದೆ ಸುಮಲತಾ ಅವರನ್ನ ಅವರ ನಿವಾಸದಲ್ಲಿ ಭೇಟಿಯಾಗಿ ಮೈತ್ರಿ ಬೆಂಬಲಿಸುವಂತೆ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಂಬರೀಷ್ ಮನೆ ನನಗೆ ಹೊಸದಲ್ಲ. ಸುಮಲತಾ ಅಕ್ಕ ಅವರ ಸಹಕಾರ ಕೋರಿದ್ದೇನೆ, ಮಂಡ್ಯದಲ್ಲಿ ತೀರ್ಮಾನ ಪ್ರಕಟ ಮಾಡ್ತೀನಿ ಅಂತ ಅವರೇ ಹೇಳಿದ್ದಾರೆ. ಅವರು ಬಿಜೆಪಿ ಜೊತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ.
ಇವತ್ತಿನ ಮಾತುಕತೆ ಸೌಹಾರ್ದಯುತವಾಗಿ ಆಗಿದೆ. ಮಾತುಕತೆ ವೇಳೆ ಯಾವುದೇ ಷರತ್ತು ಹಾಕಿಲ್ಲ ಎಂದು ಹೇಳಿದ್ದಾರೆ.
ವಿಜಯೇಂದ್ರ ಅವರ ಜೊತೆ ಹಲವು ವಿಚಾರಗಳನ್ನ ಚರ್ಚಿಸಿದ್ದಾರೆ. ಎಲ್ಲಾ ಮುಕ್ತವಾಗಿ ಚರ್ಚೆ ಮಾಡಿದ ಬಳಿಕ ನಿರ್ಧಾರ ಪ್ರಕಟಿಸುತ್ತೇನೆ. ಏಪ್ರಿಲ್ 4ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ.
ಇದೇ ವೇಳೆ ಡಿಕೆಶಿ ಕುರಿತು ಮಾತನಾಡಿದ ಹೆಚ್ಡಿಕೆ, ಡಿಕೆ ಶಿವಕುಮಾರ್ ನನಗೆ ವೈರಿಯಲ್ಲ, ಅವರು ನನ್ನ ದೊಡ್ಡ ಹಿತೈಷಿ. 5 ವರ್ಷ ಸರ್ಕಾರ ಸಂಪೂರ್ಣ ನಡೆಸಲಿ, 39 ಶಾಸಕರಿರುವ ಪಕ್ಷಕ್ಕೆ ಸಿಎಂ ಸ್ಥಾನ ಕೊಟ್ವಿ ಅಂತ ಪದೇ ಪದೇ ಹೇಳ್ತಿದ್ದಾರೆ.
5 ವರ್ಷ ನಾಮಕಾವಸ್ತೆಯಾಗಿ ಅಧಿಕಾರ ಕೊಟ್ಟಿದ್ದರು. ಒಂದು ದಿನವೂ ಅಧಿಕಾರ ನೆಮ್ಮದಿಯಾಗಿ ನಡೆಸಲು ಬಿಡಲಿಲ್ಲ. ಅದಕ್ಕೇ ಸಮ್ಮಿಶ್ರ ಸರ್ಕಾರ ಹೋಗಿದ್ದು, ನನ್ನಿಂದ ಸರ್ಕಾರ ಹೋಗಲಿಲ್ಲ. ಯಾರು ಶತೃ, ಯಾರು ಹಿತೈಷಿ ಅಂತ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ ಎಂದು ತಿರುಗೇಟು ನೀಡಿದ್ದಾರೆ.