ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗ್ರೀನ್ಪೀಸ್ ಇಂಡಿಯಾ ಸಂಸ್ಥೆಯು ಸುಸ್ಥಿರ ನಗರಗಳು ಮತ್ತು ಪೌಷ್ಟಿಕಾಂಶದ ವೈವಿಧ್ಯತೆಗೆ ಸಂಬಂಧಿಸಿದ ಅಂಶಗಳಿಗೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಆದ್ಯತೆ ನೀಡುವಂತೆ ಆಗ್ರಹಿಸಿ, ಒಟ್ಟು 20 ಅಂಶಗಳ ಶಿಫಾರಸುಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ಸಲ್ಲಿಸಿದೆ. ಈ ಶಿಫಾರಸ್ಸುಗಳೊಂದಿಗೆ ಗ್ರೀನ್ಪೀಸ್ ಇಂಡಿಯಾ, ರಾಜಕೀಯ ಪಕ್ಷಗಳಿಗೆ ಸುಸ್ಥಿರ ನಗರಗಳು, ಸರ್ವರಿಗೂ ಸಮಾನ ಸಂಚಾರ ಸಾರಿಗೆ ವ್ಯವಸ್ಥೆಯ ಅವಕಾಶಗಳು ಮತ್ತು ಸುಸ್ಥಿರ ಕೃಷಿಯಂತಹ ಪ್ರಮುಖ ಪರಿಸರ ಸಮಸ್ಯೆಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಶಾಸನ ಸಭೆಯ ನಿರ್ಣಯಗಳಲ್ಲಿ ಗಂಭೀರವಾಗಿ ಪರಿಗಣಿಸಲು ಹಕ್ಕೊತ್ತಾಯ ಮಂಡಿಸಿದೆ.
ಸುಸ್ಥಿರ ನಗರಗಳಿಗೆ ಸಂಬಂಧಿಸಿದಂತೆ ಮಂಡಿಸಲಾದ ಶಿಫಾರಸ್ಸುಗಳು ಸೈಕಲ್ ಸವಾರಿ (ಸೈಕ್ಲಿಂಗ್) ರೀತಿಯ ಸಾರ್ವಜನಿಕ ಸಾರಿಗೆ ಮತ್ತು ವಾಕಿಂಗ್ನಂತಹ ಮೋಟಾರುರಹಿತ ಸಾರಿಗೆ (NMT) ಮೇಲೆ ಕೇಂದ್ರೀಕರಿಸುತ್ತವೆ. ಇದರೊಂದಿಗೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಹೈಬ್ರಿಡ್ ಮಾದರಿಯ ಕೆಲಸದ ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಈ ಶಿಫಾರಸ್ಸುಗಳ ಮೂಲಕ, ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್ ORR) ಉದ್ದಕ್ಕೂ ಬಸ್ ಆದ್ಯತಾ ಲೇನ್ನ ಪುನರುಜ್ಜೀವನ, ಮರುನಿರ್ಮಾಣ ಮತ್ತು ಸಮಗ್ರ ಮಹಾನಗರ ಯೋಜನೆಯಲ್ಲಿ ಸೂಚಿಸಿದ 11 ಇತರ ಬಸ್ ಲೇನ್ಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ದಟ್ಟಣೆ ಮತ್ತು ಮಾಲಿನ್ಯದ ಮಟ್ಟಗಳನ್ನು ಗಮನದಲ್ಲಿರಿಸಿಕೊಂಡು ಈ ಬದಲಾವಣೆಗಳಿಗೆ ತುರ್ತಾಗಿ ಸ್ಪಂದಿಸುವಂತೆ ಪ್ರಸ್ತುತ ಹಕ್ಕೊತ್ತಾಯಗಳನ್ನು ಸಲ್ಲಿಸಲಾಗಿದೆ ಎಂದು ಗ್ರೀನ್ಪೀಸ್ ಇಂಡಿಯಾದ ಹಿರಿಯ ಪ್ರಚಾರಕ ರೋಹಿನ್ ಕುಮಾರ್ ಹೇಳುತ್ತಾರೆ.