ಬೆಂಗಳೂರು: ಯುಜಿಸಿ ಕಡೆಯಿಂದ SC ಹಾಗು ST ವಿದ್ಯಾರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ರಿಯಾಯಿತಿ ದೊರೆತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಡಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಥವ ನೇಮಕಾತಿ ಪರೀಕ್ಷೆಗಳಿಗೆ ಈ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸ್ಪಷ್ಟನೆ ನೀಡಿ, ಕರಡು ಮಾರ್ಗಸೂಚಿ ಹೊರಡಿಸಿದೆ.
SCಗಳಿಗೆ ಶೇ.೧೫, SCಗಳಿಗೆ ಶೇ.೭.೫, ಕೆನೆಪದರ(Creamy layer)ಕ್ಕೆ ಒಳಪಡದ OBCಗಳಿಗೆ ಶೇ.೨೭ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶೇ.೧೦ ಮೀಸಲಾತಿ ಒದಗಿಸಲಾಗಿದೆ. ವಿಕಲಾಂಗ ವಿದ್ಯಾರ್ಥಿಗಳಿಗೂ ವಿನಾಯಿತಿ ಅನ್ವಯಿಸುತ್ತದೆ.
ಈ ಕುರಿತು ಯುಜಿಸಿ ೨೦೦೬ರಲ್ಲೇ ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾರ್ಗಸೂಚಿ ನೀಡಿದ್ದರೂ ಅನುಸರಿಸುತ್ತಿದ್ದ ನಿಯಮಗಳಲ್ಲಿ ಸಾಮ್ಯತೆಯ ಕೊರತೆಯಿತ್ತು. ಪರಿಣಾಮವಾಗಿ ೨೦೧೯ರಲ್ಲಿ ಸಂಸತ್ತು ಅಂಗೀಕರಿಸಿದ ತಿದ್ದುಪಡಿ ಆಧರಿಸಿ ಹೊಸ ನಿಬಂಧನೆಗಳನ್ನು ಸೇರಿಸಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಲು ಜ.೩೦ನ್ನು ಕೊನೆಯ ದಿನವಾಗಿ ನಿಗದಿಪಡಿಸಲಾಗಿದೆ.
ನೀತಿಯ ಪ್ರಕಾರ ದಲಿತರು ಹಿಂದು, ಸಿಖ್ ಅಥವ ಬೌದ್ಧ ಧರ್ಮವನ್ನು ಬಿಟ್ಟು ಬೇರೆ ಧರ್ಮಗಳಿಗೆ ಸೇರಿದರೆ ಅಂಥವರು ಮೀಸಲಾತಿ ಸೌಭ್ಯಯದಿಂದ ವಂಚಿತರಾಗುತ್ತಾರೆ. ಮತಾಂತರಗೊಂಡವರು ತಮ್ಮ ಸ್ವಧರ್ಮಕ್ಕೆ ಮರಳಿದರೆ ಸೌಲಭ್ಯಗಳು ನಿಯಮಾನುಸಾರ ದೊರೆಯುತ್ತವೆ ಎಂದು ತಿಳಿಸಲಾಗಿದೆ.