ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಕರ್ನಾಟಕದ ಬಡವರಿಗೆ ವಿತರಿಸಲು ಅಗತ್ಯವಾಗಿರುವ ಅಕ್ಕಿಯನ್ನು ಕೇಂದ್ರ ಸರಕಾರದಿಂದ ಖರೀದಿಸಲು ಕೇಳಿದ್ದೇವು. ಇದರ ಹೊರತು ಪುಕ್ಕಟೆಯಾಗಿಯೇನೂ ಕೇಳಿರಲಿಲ್ಲ. ಆದರೆ ಕೇಂದ್ರದವರು ಇದರಲ್ಲೂ ರಾಜಕೀಯ ಮಾಡುವ ಮೂಲಕ ಬಡಜನ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ ಅಗತ್ಯದ ಬಗ್ಗೆ ನಾವು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಹೇಳಿದ್ದೇವೆ. ಇನ್ನು ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಧ್ವನಿ ಎತ್ತಬೇಕು. ದೇವರು ಇನ್ನಾದರೂ ಅವರಿಗೆ ಸದ್ಬುದ್ಧಿಯನ್ನು ಕೊಡಲಿ ಅಷ್ಟೆ ಎಂದು ಅವರು ಕುಟುಕಿದರು.
ಕಾಂಗ್ರೆಸ್ ಸಕಾರವು ಚುನಾವಣೆಯ ಹೊತ್ತಿನಲ್ಲೇ ಅನ್ನಭಾಗ್ಯ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈಗ ಇವುಗಳನ್ನು ಒಂದೊಂದಾಗಿ ಜಾರಿಗೆ ತರಲಾಗುತ್ತಿದೆ. ಬಡವರ ಹಸಿವನ್ನು ನೀಗಿಸುವಂತಹ ಅನ್ನಭಾಗ್ಯ ಯೋಜನೆಗೆ ಮೊದಲು ಅಕ್ಕಿ ಕೊಡುವುದಾಗಿ ಹೇಳಿದ್ದ ಕೇಂದ್ರದ ಬಿಜೆಪಿ ಸಕಾರವು, ಇದೀಗ ಭರವಸೆಯಂತೆ ನಡೆದಿಕೊಳ್ಳುತ್ತಿಲ್ಲ. ಅಗತ್ಯ ಅಕ್ಕಿ ಪೂರೈಸುತ್ತಿಲ್ಲ, ಇದು ಅವರ ಸಣ್ಣತನವನ್ನು ತೋರಿಸುತ್ತದೆ ಅಷ್ಟೆ ಎಂದು ಪಾಟೀಲರು ಟೀಕಿಸಿದರು.