ಬೆಂಗಳೂರು: ಮುನಿದಿರುವ ಮುಂಗಾರು ನಡುವೆಯೇ ಆಗಾಗ್ಗೆ ಸರಿಯುತ್ತಿರುವ ಮಳೆಯಿಂದ ರೋಗಕಾರಕ ಈಡಿಸ್ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಇದರಿಂದ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಗಣಗಳು ಏರಿಕೆಯಾಗುತ್ತಿದ್ದು, ಜನರು ಜ್ವರ ಬಾಧೆಯಿಂದ ಕಂಗಾಲಾಗಿದ್ದಾರೆ.
ಡೆಂಗ್ಯೂ ಪ್ರಕರಣಗಳ ಸಂಖ್ಯೆ 10 ಸಾವಿರ ಗಡಿ ಸಮೀಪಿಸಿದ್ದು, ಚಿಕೂನ್ಯ ಗುನ್ಯಾ ಸೋಂಕಿತರ ಸಂಖ್ಯೆಯೂ ಒಂದು ಸಾವಿರಕ್ಕೆ ಹತ್ತಿರದಲ್ಲಿದೆ.
ಈವರೆಗೂ 68 ಸಾವಿರಕ್ಕೂ ಅಧಿಕ ಡೆಂಗ್ಯೂ ಶಂಕಿತರ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, 9,559 ಮಂದಿಗೆ ಸೋಂಕು ದೃಢಪಟ್ಟಿದೆ. ಅದೇ ರೀತಿ 22 ಸಾವಿರಕ್ಕೂ ಅಧಿಕ ಚಿಕೂನ್ ಗುನ್ಯಾ ಶಂಕತರ ರಕ್ತದ ಮಾದರಿ ಪರೀಕ್ಷಿಸಲಾಗಿದ್ದು, ಇದುವರೆಗೂ 982 ಮಂದಿ ರೋಗದಿಂದ ಬಳಲಿದ್ದಾರೆ.
ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುವ ಡೆಂಗ್ಯೂ ಹಾಗೂ ಚಿಕೂನ್ಗುನ್ಯಾ ರೋಗವು ವೈರಾಣು ಸೋಂಕಾಗಿದೆ. ಇದು ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ. ಇದರಿಂದ ಹರಡುವ ರೋಗಕ್ಕೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ಚಿಕಿತ್ಸೆ ಇಲ್ಲದಿರುವ ಕಾರಣ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ರೋಗ ಉಲ್ಬಣಗೊಂಡು, ಮಾರಣಾಂತಿಕವಾಗುವ ಸಾಧ್ಯತೆಗಳಿವೆ.
ಪ್ರತಿ ಜಿಲ್ಲೆಯಲ್ಲೊಂದರಂತೆ ಬೆಂಗಳೂರು ನಗರ (5,511), ಮೈಸೂರು (454), ಉಡುಪಿ (429),ಶಿವಮೊಗ್ಗ (232), ಕಲಬುರಗಿ (219), ದಕ್ಷಿಣ ಕನ್ನಡ (210), ವಿಜಯಪುರ (188), ಚಿತ್ರದುರ್ಗ (167), ಬೆಳಗಾವಿ (154), ದಾವಣಗೆರೆ (152), ಹಾಸನ (145),ಚಿಕ್ಕಮಗಳೂರು (143),ತುಮಕೂರು (136), ಕೊಡಗು (119) ಧಾರವಾಡ (115), ಚಾಮರಾಜನಗರ (113), ಮಂಡ್ಯ (108), ಕೋಲಾರ (106) ಹೆಚ್ಚಿನ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.