ಬೆಂಗಳೂರು: ಕನ್ನಡ ಸಿನಿಮಾವೊಂದಕ್ಕೆ ಸೆನ್ಸಾರ್ ಸರ್ಟಿಫಿಕೆಟ್ ನೀಡಲು ಲಂಚ ಪಡೆಯುತ್ತಿದ್ದ ಸೆನ್ಸಾರ್ ಅಧಿಕಾರಿಯೊಬ್ಬ ಸಿಬಿಐ ಬಲೆಗೆ ಬಿದ್ದಿದ್ದಾರೆ. ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಬಂಧಿತ.
ಸಂವಿಧಾನ ಸಿನಿ ಕಂಬೈನ್ಸ್ ನಿರ್ಮಾಣದ ಅಡವಿ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಲು ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಪ್ರಶಾಂತ್ ಕುಮಾರ್ ಎನ್ನುವವರು ಹನ್ನೆರಡು ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಸಿನಿಮಾದಲ್ಲಿನ ಸಬ್ ಟೈಟಲ್ ವಿಚಾರವಾಗಿ ಕ್ಯಾತೆ ತೆಗೆದಿದ್ದ ಅಧಿಕಾರಿ ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದರು ಎಂದು ಹೇಳಲಾಗುತ್ತಿದ್ದು, ಚಿತ್ರ ನಿರ್ಮಾಪಕ ಟೈಗರ್ ನಾಗ್, ಸಿಬಿಐ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು.
ಟೈಗರ್ ನಾಗ್ ಕೊಟ್ಟ ದೂರಿನನ್ವಯ ಸಿಬಿಐ ಅಧಿಕಾರಿಗಳು ನವೆಂಬರ್ 28ರ ಸಂಜೆ ಆರು ಗಂಟೆಗೆ ಅಧಿಕಾರಿ ಲಂಚ ಪಡೆಯುವ ಸಂದರ್ಭದಲ್ಲೇ ದಾಳಿ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ನಿನ್ನೆಯಷ್ಟೇ ಮಲ್ಲೇಶ್ವರಂ ಥಿಯೇಟರ್ ವೊಂದರಲ್ಲಿ ಅಧಿಕಾರಿ ಅಡವಿ ಸಿನಿಮಾವನ್ನು ವೀಕ್ಷಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.