ಬೆಂಗಳೂರು: ರಾಜ್ಯ ಸರ್ಕಾರದ ನಿಗಮ, ಮಂಡಳಿಗಳಿಗೆ ನೇಮಕ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯುಧ ಪೂಜೆ ನೆರವೇರಿಸಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅ.25ರ ಬಳಿಕ ಈ ಸಂಬಂಧ ಸಿಎಂ ಹಾಗೂ ತಾವು ನಡೆಸುವುದಾಗಿ ಹೇಳಿದ್ದಾರೆ.
ಯಾರಿಗೆ ಎಷ್ಟು ಪ್ರಾತಿನಿಧ್ಯ ಎಂಬುದರ ಬಗ್ಗೆ ಮಾತುಕತೆಯಲ್ಲಿ ತೀರ್ಮಾನವಾಗುವ ಸಾಧ್ಯತೆಗಳಿವೆ. ಶಾಸಕರು, ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎನ್ನುವ ಹಂಬಲ ತೀವ್ರವಾಗಿ ನಮಗೂ ಇದೆ. ನಾನೂ ಒಬ್ಬ ಕಾರ್ಯಕರ್ತನಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ದಸರಾ ಹಬ್ಬದ ಬಳಿಕ ಕಾರ್ಯಾಧ್ಯಕ್ಷರು, ನಿಗಮ ಮಂಡಳಿಗಳ ನೇಮಕದ ಸಂಬಂಧ ಸಭೆಗಳು ನಡೆಯಲಿವೆ. ಕಳೆದ 20 ರಂದು ಸಿಎಂ ಜತೆ ಮೊದಲ ಸುತ್ತಿನ ಮಾತುಕತೆ ನಡೆಸಬೇಕೆಂದು ಸಮಯ ನಿಗದಿಯಾಗಿತ್ತು.ಆದರೆ ಆ ದಿನ ಬೇರೆ ಕೆಲಸಗಳ ನಿಮಿತ್ತ ಚರ್ಚೆ ನಡೆಯಲಿಲ್ಲ. ಹಬ್ಬ ಮುಗಿದ ನಂತರ ನಾವಿಬ್ಬರು ಕುಳಿತು ಚರ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.