ದಾವಣಗೆರೆ: ಸೌಜನ್ಯ ಪ್ರಕರಣದ ಮರು ತನಿಖೆ ಅಗತ್ಯವಿಲ್ಲ ಎಂದಿರುವ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ತಿಳಿವಳಿಕೆ ಕಡಿಮೆ ಇದೆ. ಯಾರೋ ಹಳ್ಳಿಯಿಂದ ಬಂದವರು ಹೇಳಿರಬೇಕು. ದೊಡ್ಡ ವಿಷಯ ಅಲ್ಲ ಅದು. ಹಾಗಾಗಿ, ಈ ರೀತಿ ಹೇಳಿಕೆ ನೀಡಿರಬಹುದು. ಸರ್ಕಾರ ಮರು ತನಿಖೆ ನಡೆಸದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವೆ ಅಷ್ಟೇ. ತನಿಖೆ ಮಾಡಿದರೆ ಸ್ವಾಗತ. ನ್ಯಾಯ ಸಿಗದಿದ್ದರೆ ಈ ಸರ್ಕಾರವನ್ನು ನಾವಲ್ಲ, ಅಣ್ಣಪ್ಪ, ಮಂಜುನಾಥ ಸ್ವಾಮಿಯೂ ಬಿಡೋದಿಲ್ಲ ಎಂದು ಹೋರಾಟಗಾರ, ಪ್ರಜಾಪ್ರಭುತ್ವ ವೇದಿಕೆ ರಾಜ್ಯಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜತೆಗೆ ಮಾತನಾಡಿದ ತಿಮರೋಡಿ ಮರು ತನಿಖೆ ಸಾಧ್ಯವಿಲ್ಲ ಎಂದಿರುವ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನನಗೆ ಎಂಥ ಪ್ರಭಾವಿಗಳು ಫೋನ್ ಮಾಡಿ ಬೆದರಿಕೆ ಹಾಕಿದರೂ ಉಳಿಗಾಲ ಇಲ್ಲ. ನನಗೇನೂ ತಲೆಬಿಸಿ ಇಲ್ಲ. ಇದುವರೆಗೆ ಯಾರೂ ಫೋನ್ ಮಾಡಿ ಬೆದರಿಕೆ ಹಾಕಿಲ್ಲ. ಸೌಜನ್ಯಳಿಗೆ ನ್ಯಾಯ ಸಿಗುವಂತಾಗಲು ಕಾನೂನು ಹೋರಾಟ ಮುಂದುವರಿಸ್ತೇವೆ. ದೇಶದ ಕಾನೂನಿನ ಮೇಲೆ ನಂಬಿಕೆ ಇದೆ. ಅಣ್ಣಪ್ಪ ಸ್ವಾಮಿ ಶಿಕ್ಷೆ ಕೊಟ್ಟೇ ಕೊಡುತ್ತಾನೆ. ಸೌಜನ್ಯಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.
ಹಿಂದೂ ಧರ್ಮದ ಪ್ರತಿಪಾದಕ
ಹಿಂದೂ ಧರ್ಮದ ಪ್ರತಿಪಾದಕ ನಾನು. ಕಳೆದ 40 ವರ್ಷಗಳಿಂದಲೂ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ನಾನು ತಪ್ಪು ಮಾಡಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಮುಗ್ಧ ಅಮಾಯಕ ಬಾಲಕಿಯನ್ನು ಕೊಂದವರಿಗೆ ದಂಡನೆ ಆಗಲೇಬೇಕು. ಹಿಂದೂ ಧರ್ಮ ನಾಶಕ್ಕೆ ಮುಂದಾದರೆ ಬಾಂಬರ್ಗಳಾಗುತ್ತೇವೆ. ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಸಂತೋಷ್ ರಾವ್ ನಿರಪರಾಧಿ ಎಂದು ಕೋರ್ಟ್ ತೀರ್ಪು ನೀಡಿದೆ. ಹಾಗಾದರೆ ರೇಪ್ ಮಾಡಿ ಹತ್ಯೆ ಮಾಡಿದವರು ಯಾರು? ಇದುವರೆಗೆ ಯಾಕೆ ಬಂಧಿಸಿಲ್ಲ? ಸೌಜನ್ಯಳ ಸಾವಿಗೆ ನ್ಯಾಯ ಸಿಗಲೇಬೇಕು. ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದರು.
ಹಿಂದುತ್ವದ ಪಾಠ ಮಾಡಬೇಡಿ
ನನಗೆ ಹಿಂದುತ್ವದ ಪಾಠ ಹೇಳಿಕೊಡಲು ಕೆಲವರು ಬರುತ್ತಿದ್ದಾರೆ. ಹಿಂದುತ್ವದ ಪಾಠ ಯಾವ ಸಂಘಟನೆ, ರಾಜಕೀಯ ಪಕ್ಷಗಳಿಂದಲೂ ಬೇಡ. ಕಾರ್ಯಕರ್ತರ ನರನಾಡಿಯಲ್ಲೂ ಹಿಂದುತ್ವ ಇದೆ. ನಾವು ಯಾರ ವಿರುದ್ಧವೂ ಅಲ್ಲ.
ಸನಾತನ ಹಿಂದೂ ಧರ್ಮದ ಪರ ನಡೆಯುತ್ತೇವೆ. ಸೌಜನ್ಯ ಘಟನೆ ಆದಾಗಲೇ ಹೇಳಿದ್ದರೂ ಸರಿಮಾಡಿಕೊಂಡಿಲ್ಲ. ಮುಂಬರುವ ದಿನಗಳಲ್ಲಿ ಸರಿಯಾದ ಉತ್ತರ ಕೊಟ್ಟೇ ಕೊಡುತ್ತೇವೆ. ನಾವು ಸುಮ್ಮನಿದ್ದರೆ ಅಣ್ಣಪ್ಪ, ಮಂಜುನಾಥ ಸ್ವಾಮಿ ನಮ್ಮನ್ನು ಸುಮ್ಮನೆ ಬಿಡ್ತಾರಾ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲೇಬೇಕೆಂಬುದು ನಮ್ಮ ಒಕ್ಕೊರಲಿನ ಒತ್ತಾಯ ಎಂದು ಹೇಳಿದರು.
ಮೂರು ಸಾಕ್ಷಿ ನಾಶ
ಸನಾತನ ಹಿಂದೂ ಧರ್ಮದ ಮೇಲೆ ಪ್ರಹಾರ ಮಾಡುವವರು ಸೌಜನ್ಯ ಕೇಸ್ನಿಂದ ಸಿಕ್ಕಿಬಿದ್ದಿದ್ದಾರೆ. ಇದು ಸಂಘ ಪರಿವಾರ, ಹಿಂದು ಸಂಘಟನೆಗಳಿಗೆ ಗೊತ್ತಿಲ್ಲವೆ? ಸೌಜನ್ಯ ಕೇಸ್ನ ಮೂರು ಸಾಕ್ಷಿಗಳನ್ನು ನಾಶ ಮಾಡಿದ್ದಾರೆ. ಪದ್ಮಾವತಿಯನ್ನು 40 ದಿನ ರೇಪ್ ಮಾಡಿ ಕೊಂದು ಹಾಕಿದ್ದರು. ಈ ಪ್ರಕರಣವೂ ಮುಚ್ಚಿ ಹೋಯಿತು. ಹದಿನೇಳು ವರ್ಷದ ಅಪ್ರಾಪ್ತ ಬಾಲಕಿಯ ಸಾವಿಗೆ ನ್ಯಾಯ ಸಿಕ್ಕಿಲ್ಲ. ಆರೋಪಿಗಳು ಸಿಕ್ಕಿಲ್ಲ ಎಂದು ಹೇಳಿದರು.
ಸೌಜನ್ಯ ಕುಟುಂಬದವರು ಕೊಟ್ಟಿರುವ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಿಸಿಲ್ಲ. ಹನ್ನೊಂದು ವರ್ಷದದಿಂದ ಸತ್ಯ ಕಣ್ಮುಚ್ಚಿ ಕುಳಿತಿದೆ. ಸೌಜನ್ಯಳಂಥ ಅಪ್ರಾಪ್ತ ಬಾಲಕಿಗೆ ಸಿಗದ ನ್ಯಾಯ ಬೇರೆ ಯಾರಿಗೆ ಸಿಗುತ್ತದೆ ಎಂಬ ವಿಶ್ವಾಸ ಇಟ್ಟುಕೊಳ್ಳಲು ಸಾಧ್ಯ. ನನ್ನ ಮೇಲೆ ಹಿಂದೂ ವಿರೋಧಿ, ದುಡ್ಡು ತೆಗೆದುಕೊಂಡಿದ್ದೇನೆಂಬ ಸುಳ್ಳು ಆರೋಪ ಮಾಡಿದ್ದಾರೆ.
ಅತ್ಯಾಚಾರ, ಕೊಲೆ ಪ್ರಕರಣದ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಆಗಿನ ತನಿಖಾಧಿಕಾರಿ ಯೋಗೀಶ್, ವೈದ್ಯಾಧಿಕಾರಿ ಆದಂ, ರಶ್ಮಿ, ಆಗಿನ ಎಸ್ಪಿ ಅಭಿಷೇಕ್ ಗೋಯಲ್ ಮುಗಿಸಿಯಾಗಿದೆ. ತನಿಖಾಧಿಕಾರಿಗೆ ಗಲ್ಲು ಆಗಬೇಕು. ಸರ್ಕಾರಿ ಅಧಿಕಾರಿಗೆ ಜ್ಞಾನ ಇಲ್ಲವೆ? ಉದ್ದೇಶಪೂರ್ವಕವಾಗಿ ಸಾಕ್ಷಿ ನಾಶ ಮಾಡಲಾಗಿದೆ. ಇವರಿಗೆಲ್ಲರಿಗೂ ಶಿಕ್ಷಯಾಗಬೇಕು. ಸೌಜನ್ಯ ಪೋಷಕರು ಕೊಟ್ಟ ದೂರು ತೆಗೆದುಕೊಂಡಿಲ್ಲ. ಇದರಲ್ಲಿ ಉಲ್ಲೇಖಿಸಿರುವ ಅನಮಾನಾಸ್ಪದ ವ್ಯಕ್ತಿಗಳ ಕುರಿತಾಗಿ ಸರಿಯಾಗಿ ತನಿಖೆ ಯಾಕೆ ನಡೆದಿಲ್ಲ ಎಂದು ಅವರು ಪ್ರಶ್ನಿಸಿದರು.