ದಾವಣಗೆರೆ: ಮುಂದಿನ ಬಜೆಟ್ನಲ್ಲೇ ರಾಜ್ಯದ ಎಲ್ಲಾ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ.
ಪತ್ರಿಕೆಯ ಮಹತ್ವದ ಕುರಿತು ಮಾತನಾಡಿದ ಮುಖ್ಯಮಂತ್ರಿ, ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ, ಅಂಬೇಡ್ಕರ ಅವರು ಸಹ ಪತ್ರಕರ್ತರಾಗಿದ್ದರು. ಆ ಸಮಯದಲ್ಲಿ ಪತ್ರಿಕೆಗಳು ಅದ್ಭುತ ಕೆಲಸ ಮಾಡಿವೆ ಎಂದರು.
ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ʼಧ್ವನಿ ಇಲ್ಲದವರಿಗೆ ಧ್ವನಿ ಆಗಬೇಕಾಗಿದ್ದು ಪತ್ರಕರ್ತನ ಜವಾಬ್ದಾರಿ. ಹೀಗಿರುವಾಗ ಮಾಧ್ಯಮ ಮೌಢ್ಯವನ್ನು ಬೆಂಬಲಿಸುವಂತಿರಬಾರದುʼ ಎನ್ನುತ್ತ, ತಮ್ಮ ಕಾರ್ ಮೇಲೆ ಕಾಗೆ ಕುಳಿತಾಗ ಹಬ್ಬಿಸಲಾಗಿದ್ದ ಸುದ್ದಿ ಹಾಗು ಚಾಮರಾಜನಗರಕ್ಕೆ ಹೋದರೆ ಸಿಎಂ ಹುದ್ದೆ ಹೋಗುತ್ತದೆ ಎಂಬ ಊಹೆಯನ್ನು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಕೆಲ ಯೋಜನೆಗಳ ಬಗ್ಗೆ ಮಾತನಾಡಿ, ನಾವು ಕೊಟ್ಟ ಗ್ಯಾರೆಂಟಿಯಿಂದ ಎಲ್ಲ ಜಾತಿ, ಧರ್ಮದವರಿಗೆ ಸಹಾಯ ಆಗಿದೆ. ನಾನು ಸಿಎಂ ಅದ ಮೇಲೆ ಮಾಶಾಸನ ಹೆಚ್ಚಿಸಿದ್ದೇನೆ. ಕಾರ್ಮಿಕ ಇಲಾಖೆಯಿಂದ ವಿಮೆ ಯೋಜನೆ ಜಾರಿಗೆ ತಂದಿದ್ದು ಸಹ ನಮ್ಮ ಸರ್ಕಾರ ಎಂದು ಹೇಳಿದರು.