ದಾವಣಗೆರೆ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ನಾನೂ ಸಹ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಜೊತೆಗೆ ನಾನೂ ಮುಖ್ಯಮಂತ್ರಿ ಹುದ್ದೆಯ ರೇಸ್ ನಲ್ಲಿದ್ದೇನೆ ಎಂದರು.
ದಾವಣಗೆರೆ ದಕ್ಷಿಣ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಸ್ಪರ್ಧಿಸಲು ನನ್ನ ಬಳಿ ದುಡ್ಡಿಲ್ಲ, ಶಕ್ತಿ ಇಲ್ಲ ಎಂದು ಯಾರೂ ಭಾವಿಸುವುದು ಬೇಡ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯೂ ಆಗುತ್ತೇನೆ ಎಂದು ಅವರು ನುಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ನನಗೆ ಮಾಹಿತಿಯಿಲ್ಲ. ಜೂನ್ 16ಕ್ಕೆ ನನ್ನ ಮೊಮ್ಮಗಳ ಮದುವೆಗೆ ಅವರು ಆಗಮಿಸಲಿದ್ದಾರೆ.
ಅವರ ಪಕ್ಷವೇ ಬೇರೆ ನನ್ನ ಪಕ್ಷವೇ ಬೇರೆ. ನಾನು ವಿಪಕ್ಷ ಕಾಂಗ್ರೆಸ್ ಶಾಸಕ. ಬಿಜೆಪಿಯವರು ತಮ್ಮ ಸ್ಪರ್ಧೆಯ ವಿಚಾರವನ್ನು ನನ್ನ ಬಳಿ ಚರ್ಚಿಸಲು ಹೇಗೆ ಸಾಧ್ಯ ಎಂದರು.