ಬೆಂಗಳೂರು, ಮಾ.21 : ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸುವ ಕುರಿತು ಅಧ್ಯಯನ ನಡೆಸಲು ಸಮತಿಯೊಂದನ್ನು ರಚಿಸಲಾಗುವುದು, ಬಳಿಕ ಮುಖ್ಯಮಂತ್ರಿಯವರ ಜೊತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭರವಸೆ ನೀಡಿದರು.
ವಿಧಾನ ಪರಿಷತ್ ನ ಶೂನ್ಯವೇಳೆಯಲ್ಲಿ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಅವರು ವಿಷಯ ಪ್ರಸ್ತಾಪಿಸಿ, ಸುಮಾರು 700 ಶ್ಲೋಕಗಳಿರುವ ಭಗವದ್ಗೀತೆಯನ್ನು ಮಕ್ಕಳಿಗೆ ಕಲಿಸುವ ಅಗತ್ಯ ಇದೆ. ಇದನ್ನು ಶಾಲೆಗಳಲ್ಲಿ ಪಠ್ಯವಾಗಿ ಕಲಿಸಬೇಕು ಎಂದು ಪ್ರತಿಪಾದಿಸಿದರು.
ಅದಕ್ಕೆ ಉತ್ತರಿಸಿದ ಸಚಿವ ಬಿ.ಸಿ.ನಾಗೇಶ್, ನೈತಿಕ ಶಿಕ್ಷಣ ಕುರಿತು ಈ ಮೊದಲು ಇಲ್ಲಿ ಚರ್ಚೆಯಾಗಿದೆ. ಮೊದಲು ನೈತಿಕ ಶಿಕ್ಷಣ ನೀಡಲಾಗುತ್ತಿತ್ತು. ಇತ್ತೀಚೆಗೆ ಅದು ಸಿಗುತ್ತಿಲ್ಲ ಎಂಬ ಆಕ್ಷೇಪಗಳು ಕೇಳಿ ಬಂದಿವೆ. ಮಹಾಭಾರತದಲ್ಲಿ ಅರ್ಜುನನ ಮನಸ್ಸಿನಲ್ಲಿ ಗೊಂದಲವಾದಾಗ ಕೃಷ್ಣ ಬೋದನೆ ಮಾಡಿದ್ದೆ ಭಗವದ್ಗೀತೆ. ಪ್ರಸ್ತುತ ಜಿಗುಪ್ಸೆಯ ಸನ್ನಿವೇಶಗಳಿಗೆ ಭಗವದ್ಗೀತೆ ಉತ್ತಮ ಸಂದೇಶವಾಗಬಲ್ಲದು. ಇದು ಬೋಧನೆಯಾಗಬೇಕು ಎಂಬುದು ಎಲ್ಲರ ಅಭಿಪ್ರಾಯವಾಗಿದೆ ಎಂದು ಹೇಳಿದರು.
ಸರ್ಕಾರ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸುವ ಕುರಿತು ಸಮಿತಿ ಮಾಡಲಿದೆ. ವರದಿ ಬಂದ ಬಳಿಕ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿ ಹೇಗೆ ಅನುಷ್ಠಾನಕ್ಕೆ ತರಬೇಕು ಎಂಬ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.