ಧಾರವಾಡ; ಧಾರವಾಡದ ಎಸ್ಡಿಎಂ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 306 ಕೋವಿಡ್ ಸೋಂಕಿತರು ಸಂಪೂರ್ಣವಾಗಿ ಗುಣಮುಖಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಎಸ್ಡಿಎಂ ಕ್ಯಾಂಪಸ್ ಹಾಟ್ಸ್ಪಾಟ್ ಆಗಿತ್ತು.
ನವೆಂಬರ್ 20ರ ಬಳಿಕ ಧಾರವಾಡ ಹೊರವಲಯದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಒಟ್ಟು 306 ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಎಸ್ಡಿಎಂ ಹೊರರೋಗಿಗಳ ವಿಭಾಗದ ಸೇವೆ ಸ್ಥಗಿತಗೊಳಿಸಲಾಗಿತ್ತು.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. 306 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಈಗ ಮಹಾವಿದ್ಯಾಲಯದಲ್ಲಿ ಯಾವುದೇ ಸಕ್ರಿಯ ಕೋವಿಡ್ ಪ್ರಕರಣಗಳು ಇರುವುದಿಲ್ಲ ಎಂದು ಹೇಳಿದ್ದಾರೆ.
ಎಸ್ಡಿಎಂ ಮಹಾವಿದ್ಯಾಲಯದಲ್ಲಿ ಕಂಡು ಬಂದಿದ್ದ ಕೋವಿಡ್ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ. ಡಿಸೆಂಬರ್ 13ರಂದು ಧಾರವಾಡ ಜಿಲ್ಲೆಯಲ್ಲಿ ಕೇವಲ 2 ಕೋವಿಡ್ ಸೋಂಕಿತರು ಕಂಡುಬಂದಿದ್ದು, ಒಟ್ಟು 57 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಿದ್ದಾರೆ.
ಎಸ್ಡಿಎಂ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಸೋಂಕು ಕ್ಯಾಂಪಸ್ ಆವರಣದಿಂದ ಹೊರಗೆ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜಿಲ್ಲಾಡಳಿತ ಕ್ಯಾಂಪಸ್ ಸುತ್ತಮುತ್ತಲಿನ ಶಾಲೆಗಳಿಗೆ ರಜೆ ನೀಡಿತ್ತು, ಅಂಗಡಿಗಳನ್ನು ಬಂದ್ ಮಾಡಿತ್ತು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಎಲ್ಲ ರೋಗಿಗಳ ಆರ್ಟಿಪಿಸಿಆರ್ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದ ಬಳಿಕ ಮನೆಗೆ ಕಳಿಸಬೇಕು. ನೆಗೆಟಿವ್ ವರದಿಯೊಂದಿಗೆ ಬಿಡುಗಡೆಯಾದ ವ್ಯಕ್ತಿಗಳು 7 ದಿನಗಳ ಕಾಲ ಹೋಂ ಐಸೋಲೇಷನ್ನಲ್ಲಿ ಇರಬೇಕು. 7 ದಿನಗಳ ಬಳಿಕ ಜಿಲ್ಲಾಡಳಿತ ಮತ್ತೊಮ್ಮೆ ಅವರ ಕೋವಿಡ್ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಡಲಾಗಿತ್ತು.