ಮಂಗಳೂರು: ನಾವೆಲ್ಲರೂ ಹುಟ್ಟಿರುವುದು ಹಿಂದೂ ರಾಷ್ಟ್ರದಲ್ಲಿ ಅದನ್ನು ನಾವು ಎದೆತಟ್ಟಿ ಹೇಳುತ್ತೇವೆ ಎಂದು ಮೂಲ್ಕಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದರ ಚುನಾವಣಾ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಿಥುನ್ ರೈ ನಾವೆಲ್ಲರೂ ಹುಟ್ಟಿರುವುದು ಹಿಂದೂ ರಾಷ್ಟ್ರದಲ್ಲಿ ಎಂದು ಹೇಳಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆರ್ ಎಸ್ ಎಸ್ ಹಾಗೂ ಸಂಘ ಪರಿವಾರದ ಮುಖಂಡರು ಮಾತನಾಡುವಂತೆ ಮಿಥುನ್ ರೈ ಮಾತನಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಫೆ.26ರಂದು ಮೂಡುಬಿದಿರೆ ತಾಲೂಕಿನ ಪುತ್ತಿಗೆ ನೂರಾನಿ ಮಸೀದಿಯ ನವೀಕೃತ ಮಸೀದಿಯಲ್ಲಿ `ನಮ್ಮೂರ ಮಸೀದಿ ನೋಡ ಬನ್ನಿ’ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಮಿಥುನ್ ರೈ ಸೌಹಾರ್ದತೆಯ ವಿಚಾರದಲ್ಲಿ ಮಾತನಾಡುವಾಗ, ಈ ಜಿಲ್ಲೆ ಸೌಹಾರ್ದತೆಯ ಇತಿಹಾಸ ಹೊಂದಿರುವ ಜಿಲ್ಲೆ, ಬಪ್ಪನಾಡು ದೇವಿ ಒಲಿದದ್ದು ಬಪ್ಪ ಬ್ಯಾರಿಗೆ, ಕವತಾರಿನಲ್ಲಿನ ಕೊರಗಜ್ಜನ ಕಟ್ಟೆಗೆ ಅರ್ಚಕ ಮುಸ್ಲಿಂ ಸಮುದಾಯದವರು. ಉಡುಪಿ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು. ಅತ್ತೂರು ಚರ್ಚ್, ಸುಬ್ರಹ್ಮಣ್ಯ ದೇವಸ್ಥಾನ, ಉಳ್ಳಾಲ ದರ್ಗಾದಲ್ಲಿ ಸರ್ವಧರ್ಮದವರು ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಇದು ಚರ್ಚೆ ಹುಟ್ಟುಹಾಕಿತ್ತು. ಉಡುಪಿಯ ಹಲವು ಮಠಾಧೀಶರು ಮಿಥುನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.