ಚಿತ್ರದುರ್ಗ : ದೇಶದ ಎಲ್ಲ ನಿಘಂಟುಗಳಿಂದಲೂ ‘ಶೂದ್ರ’ವೆಂಬ ಪದ ತೆಗೆದು ಹಾಕಿ. ಅದರ ಬದಲಿಗೆ ಶುದ್ಧ ಎಂಬ ಪದ ಬಳಸೋಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಕರ್ನಾಟಕ ಮಾನವ ಬಂಧುತ್ವ ವೇದಿಕೆಯಿಂದ ಚಿತ್ರದುರ್ಗ ನಗರದ ತರಾಸು ರಂಗ ಮಂದಿರದಲ್ಲಿ ಶನಿವಾರ ರಾಜ್ಯ ಬಂಧುತ್ವ ಅಧಿವೇಶನದ ಸಮಾರೋಪದಲ್ಲಿ ಮಾತನಾಡಿದ ಹಂಸಲೇಖ, ದೇಶದ ಎಲ್ಲ ನಿಘಂಟುಗಳಿಂದಲೂ ‘ಶೂದ್ರ’ ಎಂಬ ಪದ ತೆಗೆದು ಹಾಕಿ.
ಅದರ ಬದಲಿಗೆ ಶುದ್ಧ ಎಂಬ ಪದ ಬಳಸೋಣ. ದೇಶದಲ್ಲಿ ನಾವು ಶುದ್ಧರೇ ಆಗಿದ್ದೇವೆ. ಇದನ್ನು ಬಂಧುತ್ವ ವೇದಿಕೆ ಪ್ರಣಾಳಿಕೆಯಲ್ಲೂ ಸೇರಿಸಬೇಕು. ಈ ಕುರಿತು ಹಾಡೊಂದನ್ನು ರಚಿಸಿ ಅಂಬೇಡ್ಕರ್ ಜನ್ಮದಿನದಂದು ನಾಡಿಗೆ ಸಮರ್ಪಿಸುವೆ ಎಂದು ತಿಳಿಸಿದರು.
ಶುದ್ಧ-ಪ್ರಬುದ್ಧರು ಇಂದು ನಮ್ಮ ನಾಯಕರಾಗ ಬೇಕಿದೆ. ಅವರ ಮೂಲಕ ನಮ್ಮ ಪ್ರಜಾಪ್ರಭುತ್ವನ್ನು ಉಳಿಸಿ-ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೊಣೆಯರಿತ ಜ್ಞಾನಿಗಳಾಗಬೇಕಿದೆ. ಸಿಂಹಾಸನದ ಮೇಲೆ ಕುಳಿತವನ ಕಾಲು ನೆಲದ ಮೇಲಿರಬೇಕು. ನೀವು ಶುದ್ಧರಾಗಿ, ಸೇವೆಯಲ್ಲೂ ಶುದ್ಧತೆ ಇರಲಿ, ಶುದ್ಧತೆ ಹೊಂದಿದವರನ್ನು ಅಧಿಕಾರಕ್ಕೆ ತರಬೇಕಿದೆ. ಹೊಣೆಯರಿತ ಜ್ಞಾನಿಗಳ ಸಂಖ್ಯೆ ಹೆಚ್ಚಳದಿಂದ ಪ್ರಜಾಪ್ರಭುತ್ವ ಗೆಲ್ಲುತ್ತದೆ ಎಂದು ಹಂಸಲೇಖ ಹೇಳಿದರು.
ಅಧಿವೇಶನದ ಹೆಸರಲ್ಲಿ ಸೇರಿರುವ ನೀವು ಸಮಾಜಕ್ಕೆ ಕಾಮಧೇನು ಆಗಬೇಕು. ಸಂವಿಧಾನದಿಂದಾಗಿಯೇ ದೇಶದಲ್ಲಿ ಯುದ್ಧಗಳು ಸ್ಥಗಿತಗೊಂಡಿವೆ. ಶೇ.74 ಜನರು ಶಿಕ್ಷಣವಂತರಾಗಿದ್ದಾರೆ ಎಂದು ಹೇಳಿದರು.
ಕವಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ದೇಶವಿಂದು ದ್ವೇಷದಮಯ ಆಗುತ್ತಿದೆ. ಭಾಷೆ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಲೀನಗೊಳ್ಳುತ್ತಿದೆ, ಭ್ರಷ್ಟವಾಗಿದೆ. ಸುಳ್ಳಿನ ಭಾಷೆ ಶಕ್ತಿ ಇರದು ಸುಳ್ಳನ್ನೇ ಸತ್ಯವೆಂದು ಬಿಂಬಿಸ ಲಾಗುತ್ತಿದೆ. ಚರಿತ್ರೆಯನ್ನು ತಿರುಚುತ್ತಿರುವರದಿಂದ ದ್ವೇಷ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮನಸ್ಸು ಮಲೀನಗೊಂಡಿದೆ. ನಮ್ಮ ಮಕ್ಕಳು ಅವರ ಸೈನಿಕರಾಗುವುದು ಬೇಡ. ಸರ್ವಜನಾಂಗದ ಶಾಂತಿ ತೋಟಕ್ಕೆ ಇಂದು ಬೆಂಕಿ ಹಚ್ಚುವ ಕೆಲಸ ನಡೆದಿದೆ. ದೇಶದ ಅಸ್ಮಿತೆಗೆ ಧಕ್ಕೆಯಾಗುತ್ತಿದೆ. ಕೋವಿಡ್ ಕಾರಣಕ್ಕೆ ಲಕ್ಷಾಂತರ ಬಡವರು, ದಲಿತರು ಮಕ್ಕಳು ವಿದ್ಯೆಯಿಂದ ವಂಚಿತರಾಗಿದ್ದರೂ ಯಾರೂ ಬಾಯಿ ಬಿಡುತ್ತಿಲ್ಲ ಎಂದು ಬೇಸರಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಮಾತನಾಡಿ, ಭಾರತದಲ್ಲಿ ಇರುವಷ್ಟು ಮೌಢ್ಯ, ಜಾತಿಗಳು ಬೇರೆ ದೇಶಗಳಲ್ಲಿ ಇಲ್ಲ. ಕೋವಿಡ್ ಸಮಯದಲ್ಲಿ ನಮಗೆ ದೇವರು, ದೇವಾಲಯಗಳಾಗಿ ಕಂಡಿದ್ದು ವೈದ್ಯರು ಮತ್ತು ಆಸ್ಪತ್ರೆಗಳು ಎಂದರು.
ಶಾಸಕ ಟಿ.ರುದ್ರಮೂರ್ತಿ, ರಾಜ್ಯ ಎಸ್ಸಿ, ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ಚಂದ್ರಶೇಖರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚಿಂತಕರಾದ ಡಾ.ರಾಜಪ್ಪ ದಳವಾಯಿ, ರುದ್ರಪ್ಪ ಅನಗವಾಡಿ, ಕರ್ನಾಟಕ ಅಲೆಮಾರಿ ಬುಡಕಟ್ಟು ಮಹಾಸಭಾ ಕಾರ್ಯಾಧ್ಯಕ್ಷ ಆದರ್ಶ ಯಲ್ಲಪ್ಪ, ವಕೀಲ ಡಿ.ಬಾಲನ್, ಡಾ.ಲೀಲಾ ಸಂಪಿಗೆ, ರಾಜ್ಯ ಮಾನವ ಬಂಧುತ್ವ ವೇದಿಕೆ ಸಂಚಾಲಕ ಅನಂತನಾಯಕ್, ಜಿಲ್ಲಾ ಸಂಚಾಲಕ ಎಚ್.ಅಂಜಿನಪ್ಪ ಮತ್ತಿತರರು ಇದ್ದರು.