ಚಿಕ್ಕಬಳ್ಳಾಪುರ: ಪತ್ನಿಯ ಪ್ರಿಯಕರನನ್ನು ಕತ್ತುಸೀಳಿ ರಕ್ತ ಕುಡಿದು ಈ ದೃಶ್ಯವನ್ನು ವೀಡಿಯೊ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ಜೂನ್ 19ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಿಂತಾಮಣಿ ತಾಲೂಕಿನ ಬಟ್ಲಪಲ್ಲಿ ನಿವಾಸಿ ವಿಜಯ್ ಆರೋಪಿ. ಈತ ಕೆಲ ವರ್ಷದ ಹಿಂದೆ ಮಾಲಾಳನ್ನು ಮದುವೆಯಾಗಿದ್ದ. ವಿಜಯ್ ಚಿಂತಾಮಣಿ ನಗರದಲ್ಲಿ ವಾಸವಾಗಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಬಾಗೇಪಲ್ಲಿ ತಾಲೂಕು ಮಂಡಂಪಲ್ಲಿ ನಿವಾಸಿ ಮಾರೇಶ್ ಎಂಬಾತ ಕೂಡ ಚಿಂತಾಮಣಿ ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ವಾಹನದಲ್ಲಿ ಇಬ್ಬರೂ ಜತೆಯಾಗಿ ಊರೂರು ಸುತ್ತಿ ವ್ಯಾಪಾರ ಮಾಡುತ್ತಿದ್ದರು. ಇಬ್ಬರ ನಡುವೆ ಒಳ್ಳೆಯ ಸ್ನೇಹ ಕೂಡ ಇತ್ತು.
ಈ ಮಧ್ಯೆ ಮಾಲಾ ಹಾಗೂ ಮಾರೇಶ್ ನಡುವೆ ಅಕ್ರಮ ಸಂಬಂಧ ಇರುವ ಅನುಮಾನ ವಿಜಯ್ ಉಂಟಾಗಿತ್ತು. ಇದು ಆತನ ಆಕ್ರೋಶಕ್ಕೆ ಕಾರಣವಾಗಿತ್ತು. ಜೂ.19ರಂದು ತನ್ನ ಸ್ನೇಹಿತನೊಬ್ಬನ ಜತೆ ಮಾರೇಶ್ನನ್ನು ಬಾಗೇಪಲ್ಲಿ ಕ್ರಾಸ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ವಿಜಯ್, ಚಾಕುವಿನಿಂದ ಮಾರೇಶ್ನ ಕತ್ತು ಸೀಳಿದ್ದಾನೆ. ರಕ್ತ ಹೊರ ಚಿಮ್ಮಿದಾಗ ಅದನ್ನು ಕುಡಿದು ತನ್ನ ಕೋಪ ತೀರಿಸಿಕೊಂಡಿದ್ದಾನೆ. ಅಲ್ಲದೆ, ಜತೆಗಿದ್ದ ಸ್ನೇಹಿತನಿಗೆ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲು ಹೇಳಿದ್ದಾನೆ. ಬಳಿಕ ಮಾರೇಶ್ನನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಆತನ ಸ್ನೇಹಿತ ಬಳಿಕ ಮಾರೇಶ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಮಧ್ಯೆ ವಿಜಯ್ನ ಸಹೋದರ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿಸಲು ಮುಂದಾಗಿದ್ದರಿಂದ ವಿಷಯ ಬೆಳಕಿಗೆ ಬಂದಿರಲಿಲ್ಲ. ವಿಜಯ್ನ ಸ್ನೇಹಿತ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಅದು ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಪೊಲೀಸರು ವಿಜಯ್ನನ್ನು ಬಂಧಿಸಿದ್ದಾರೆ.