ಶಿಡ್ಲಘಟ್ಟ : ಗೃಹಿಣಿಯೊಬ್ಬರು ವರದಕ್ಷಿಣೆ ಕಿರುಕುಳ ಸಹಿಸಲಾಗದೆ ತನ್ನ 6 ವರ್ಷದ ಮಗು ಜತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಹರಳಹಳ್ಳಿಯಲ್ಲಿ ನಡೆದಿದೆ.
ಸೊಣ್ಣೇಗೌಡ ಎಂಬುವರ ಪತ್ನಿ ನವಲತಾ (25) ಮತ್ತು ಪುತ್ರ ಅಂಜನ್ ಗೌಡ (6) ಮೃತರು. ಬುಧವಾರ ಸಂಜೆ ತೋಟದ ಮನೆಯತ್ತ ಹೋದವರು ವಾಪಸ್ ಬಂದಿರಲಿಲ್ಲ. ಕುಟುಂಬಸ್ಥರು ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ.
ತೋಟದ ಬಳಿಯ ನೀರಿನ ಸಂಪಿನಲ್ಲಿ ಗುರುವಾರ ತಾಯಿ-ಮಗನ ಶವಗಳು ಪತ್ತೆಯಾಗಿವೆ. ಮಗಳು ಮತ್ತು ಮೊಮ್ಮಗನ ಸಾವಿನ ಸುದ್ದಿ ಬರುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ನನ್ನ ಮಗಳು ಮತ್ತು ಮೊಮ್ಮಗನ ಸಾವಿಗೆ ಅಳಿಯ ಸೊಣ್ಣೇಗೌಡ ಹಾಗೂ ಆತನ ಪಾಲಕರೇ ಕಾರಣ. ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಅವರಿಬ್ಬರೂ ಸತ್ತಿದ್ದಾರೆ ಎಂದು ಮೃತಳ ಪಾಲಕರು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.