ಬೆಂಗಳೂರು: ರಾಜ್ಯದಲ್ಲಿ ಜುಲೈ 10ರಂದು ಆಚರಿಸಲಿರುವ ಬಕ್ರೀದ್ ಹಬ್ಬದ ದಿನಗಳಲ್ಲಿ ಅಕ್ರಮ ಗೋವು, ಒಂಟೆಗಳ ಹತ್ಯೆ ಮತ್ತು ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ಸರ್ಕಾರ, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದೇಶ 2020ರ ಪ್ರಕಾರ ಆದೇಶ ಹೊರಡಿಸಿದ್ದು ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ಆದೇಶದನ್ವಯ ಕುರಿ ಹಾಗೂ ಮೇಕೆಗಳನ್ನು ಹೊರತುಪಡಿಸಿ ಇತರ ಪ್ರಾಣಿಗಳಾದ ಗೋವು, ಒಂಟೆ ಇತ್ಯಾದಿಗಳನ್ನು ಸಾಗಾಣಿಕೆ ಮಾಡಲು ಹಾಗೂ ಅನಧಿಕೃತ ಪ್ರಾಣಿ ವಧೆ ಮಾಡಲು ಅವಕಾಶವಿರುವುದಿಲ್ಲ. ಈ ಕಾಯ್ದೆಯನ್ವಯ ಪ್ರಾಣಿ ಸಾಗಾಣಿಕೆ ಹಾಗೂ ಅನಧಿಕೃತ ಪ್ರಾಣಿ ವಧೆ ತಡೆಗಟ್ಟಲು ಸರ್ಕಾರ ಪೊಲೀಸ್ಇಲಾಖೆ, ಸಾರಿಗೆ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಆದೇಶ ನೀಡಿರುತ್ತದೆ. ಈ ಇಲಾಖೆಗಳು ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೊರವಲಯದ ಹೆದ್ದಾರಿಗಳಲ್ಲಿ 5 ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆದ್ಯಾದೇಶ 2020ರ ಪ್ರಕಾರ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡು ರೂ. 50 ಸಾವಿರ ದಂಡ ಹಾಗೂ 3 ರಿಂದ 7 ವರ್ಷದವರೆಗೆ ಜೈಲು ಸಜೆ ನೀಡಲು ಅವಕಾಶವಿರುತ್ತದೆ. ಯಾವುದೇ ವ್ಯಕ್ತಿ ಕಾನೂನು ಬಾಹಿರವಾಗಿ ಗೋವು ಸಾಗಾಣಿಕೆ ಹಾಗೂ ವಧೆ ಮಾಡಿದಂತೆ ಸೂಚಿಸಲಾಗಿದೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜ್ಹೀಮ್ ಅವರು ರಾಜ್ಯದಲ್ಲಿ ಅನಧಿಕೃತವಾಗಿ ಗೋವು, ಒಂಟೆ ಹಾಗೂ ಇತರ ಪ್ರಾಣಿಗಳನ್ನು ಸಾಗಿಸುವುದು ಹಾಗೂ ಅನಧಿಕೃತವಾಗಿ ಪ್ರಾಣಿವಧೆ ಮಾಡಬಾರದೆಂದು, ಈ ವಿಷಯದ ಬಗ್ಗೆ ಭಾವುಕರಾಗದೆ ತಮ್ಮ ಹೃದಯದ ಮಾತುಗಳನ್ನು ಕೇಳಿದೆ ತಮ್ಮ ಮೆದುಳಿನ ಮಾತುಗಳನ್ನು ಕೇಳುವುದು. ರಾಜ್ಯದ ಪ್ರಜೆಗಳಾಗಿ ಸರ್ಕಾರ ನೀಡಿರುವ ಆದೇಶಗಳಂತೆ ಒಬ್ಬ ಒಳ್ಳೆಯ ನಾಗರೀಕರಾಗಿ ನಡೆದುಕೊಂಡು ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಯಾಗದಂತೆ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವಂತೆ ತಿಳಿಸಿದ್ದಾರೆ.