ಬೆಂಗಳೂರು: ವಿಧಾನ ಸಭೆ ಚುನಾವಣೆಗೆ ಬಿಜೆಪಿ ಟಿಕೇಟ್ ಘೋಷಣೆ ಬಳಿಕ ಪಕ್ಷದಲ್ಲಿ ಬಂಡಾಯದ ರಣಕಹಳೆ ಮೊಳಗಿದ್ದು ಸಾಲು ಸಾಲು ಮುಖಂಡರು ರಾಜೀನಾಮೆ ನೀಡುತ್ತಿದ್ದಾರೆ. ಮಾಜಿ ಡಿಸಿಎಂ ಈಶ್ವರಪ್ಪ, ಲಕ್ಷ್ಮಣ ಸವದಿ, ಪರಿಷತ್ ಸದಸ್ಯ ಆರ್. ಶಂಕರ್, ಸಚಿವ, ಸುಳ್ಯ ಶಾಸಕ ಅಂಗಾರ, ಗೂಳಿಹಟ್ಟಿ ಶೇಖರ್ ಸೇರಿದಂತೆ ಹಿರಿಯ ಮುಖಂಡರು ಚುನಾವಣಾ ರಾಜಕೀಯದಿಂದ ನಿವೃತ್ತಿ, ಪಕ್ಷಾಂತರದ ಕಸರತ್ತು ನಡೆಸಿದ್ದಾರೆ.
ಇನ್ನೊಂದು ಕಡೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡ ಇದೇ ಹಾದಿಯಲ್ಲಿದ್ದು ಕೊನೆಯ ಪ್ರಯತ್ನವೆಂಬಂತೆ ದೆಹಲಿ ಯಾತ್ರೆ ನಡೆಸಿದ್ದು, ಹೈಕಮಾಂಡ್ ಭೇಟಿಗೆ ಮುಂದಾಗಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ಚಾಮರಾಜನಗರ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ, ಬಂಡಾಯ ಹೆಚ್ಚಿದ್ದು, ಪಕ್ಷದ ಮುಖಂಡ ಸೋಮಣ್ಣ ವಿರುದ್ಧ ಆಡಿಯೋ ಬಿಡುಗಡೆ ಮಾಡುವುದಾಗಿ ಚಾಮರಾಜನಗರ ಟಿಕೇಟ್ ಆಕಾಂಕ್ಷಿ ರುದ್ರೇಶ್ ಹೇಳಿದ್ದಾರೆ.
ಈ ಬಗ್ಗೆ ಚಾಮರಾಜನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು ರಾಮನಗರ, ಚಾಮರಾಜನಗರದಲ್ಲಿ ಪಕ್ಷಸಂಘಟನೆಗೆ ಸೋಮಣ್ಣ ಎಳ್ಳಷ್ಟೂ ಶ್ರಮಿಸಿಲ್ಲ. ಅವರು ತಮ್ಮ ತವರು ಕ್ಷೇತ್ರದಲ್ಲಿಯೇ ಪಕ್ಷ ಸಂಘಟನೆ ಮಾಡಿಲ್ಲ. ಪಕ್ಷ ಸಂಘಟನೆಗೆ ಕರೆದರೆ ನನಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಾನು ಸರ್ಕಾರದ ಸಚಿವ ಎಂದು ಹೇಳುತ್ತಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸೋಮಣ್ಣ ನೇರ ಕಾರಣ ಎಂದು ಆರೋಪಿಸಿದ್ದಾರೆ. ಪಕ್ಷದ ಸೋಲಿಗೆ ಕಾರಣರಾದವರೇ ಅಭ್ಯರ್ಥಿಯಾಗಿರುವುದು ಬೇಸರ ತಂದಿದೆ ಎಂದು ರುದ್ರೇಶ್ ಹೇಳಿದರು.
ಬಿಎಸ್ವೈ, ಸಿದ್ದಗಂಗಾ ಶ್ರೀಗಳ ವಿರುದ್ಧ ಮಾತನಾಡಿದ್ದ ಸೋಮಣ್ಣ: ಕಳೆದ ಬಾರಿ ಮಲ್ಲಿಕಾರ್ಜುನಪ್ಪ ಸೋಲಲು ಸೋಮಣ್ಣ ಕಾರಣ. ಈ ಸಂಬಂಧ ನನ್ನಲ್ಲಿ ದಾಖಲೆಗಳಿವೆ. ಚಾಮರಾಜನಗರದಲ್ಲಿ ಎಲ್ಲರನ್ನೂ ಕುತಂತ್ರದಿಂದ ಸೋಲಿಸಿ ಅವರು ಮಾತ್ರ ಗೆಲುವು ಸಾಧಿಸುತ್ತಾರೆ. ಬಳಿಕ ಸಿದ್ದರಾಮಯ್ಯ ಅವರೊಂದಿಗೆ ಕಾಂಗ್ರೆಸ್ಗೆ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ, ಮತ್ತು ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ವಿರುದ್ಧವಾಗಿಯೂ ಅವರು ಮಾತನಾಡಿದ್ದಾರೆ. ಈ ಬಗ್ಗೆ ನನ್ನಲ್ಲಿ ಸ್ಪಷ್ಟ ದಾಖಲೆಗಳಿವೆ ಎಂದು ವಿವರಿಸಿದರು. ಇದನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದರು.